ಮಾರ್ವಾಡಿ ನೀತು ಸಾರಾ ಖಾನ್ ಆದ್ಲು
ಹೈಕೋರ್ಟ್ ಮೆಟ್ಟಿಲೇರಿದ್ದ ಅಂತರ್ ಧರ್ಮೀಯ ಪ್ರೇಮ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ನ್ಯಾಯಾಲಯ ಯುವತಿಯನ್ನು ರಿಮ್ಯಾಂಡ್ ಹೋಮ್ ಗೆ ಒಪ್ಪಿಸಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಇವರ ಮದುವೆಗೆ ಗ್ನಿನ್ ಸಿಗ್ನಲ್ ನೀಡಿದೆ.
ಮುಸ್ಲಿಂ ಧರ್ಮದ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿರುವುದಾಗಿ ನ್ಯಾಯಾಲಯದಲ್ಲಿ ಯುವತಿ ನೀಡಿದ ಹೇಳಿಕೆ ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಆಕೆಯನ್ನು ನ್ಯಾ. ಕೆ ಎಲ್ ಮಂಜುನಾಥ್ ಮತ್ತು ನ್ಯಾ. ಪಚ್ಚಾಪೂರೆ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ರಿಮ್ಯಾಂಡ್ ಹೋಮ್ ಗೆ ಕಳುಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.
ಕಳೆದ ಮೇ 3 ರಂದು ಮನೆಯಿಂದ ನಾಪತ್ತೆಯಾಗಿದ್ದ ನಾಗಾವರದ ಮಾರ್ವಾಡಿ ಯುವತಿ ನೀತು, ಮೇ 17 ರಂದು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಮೊಹಮ್ಮದ್ ಸಮೀರ್ ಎಂಬ ಯುವಕನೊಂದಿಗೆ ಮೇ 19 ರಂದು ಮದುವೆಯಾಗಿದ್ದಳು. ತಮ್ಮ ಮಗಳನ್ನು ಸಮೀರ್ ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿದ್ದಾನೆಂದು ಆರೋಪಿಸಿ ಯುವತಿಯ ತಂದೆ ರಾಮ್ ಲಾಲ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ಆದೇಶದಂತೆ ಕೆಜಿ ಹಳ್ಳಿ ಪೊಲೀಸರು ತಮಿಳುನಾಡಿನ ಡೆಂಕಣಕೋಟೆಯಲ್ಲಿ ಯುವಕ-ಯುವತಿಯನ್ನು ಪತ್ತೆ ಮಾಡಿ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಹಾಜರುಪಡಿಸಿದ್ದರು. ಮೇ 17 ರಂದು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಖಲೀಮ್, ಸಾಲತ್ ಹಾಗೂ ಜಖಾತ್ ನಿಯಮದ ಅನುಸಾರ ಮೇ 19 ಕ್ಕೆ ಸಮೀರ್ ನನ್ನು ಮದುವೆಯಾಗಿರುವುದಾಗಿ ನೀತು ಹೇಳಿದಳು.
ಆ ಸಂದರ್ಭದಲ್ಲಿ ನ್ಯಾಯಾಮೂರ್ತಿಗಳು, ಖಲೀಮ್, ಜಖಾತ್, ಸಾಲತ್ ಎಂಬ ಪದಗಳ ವಿವರಣೆ ಕೇಳಿದ್ದರು. ಆದರೆ, ಈಕೆ ಈ ಪದಗಳ ಬಗ್ಗೆ ಸಮರ್ಪಕವಾಗಿ ಉತ್ತರಿಸಲಿಲ್ಲ. ಜೊತೆಗೆ ಆಕೆಯ ವರ್ತನೆ ಅನುಮಾನಾಸ್ಪದವಾಗಿತ್ತು. ಹೀಗಾಗಿ ಆಕೆಯನ್ನು ರಿಮ್ಯಾಂಡ್ ಹೋಮ್ ಗೆ ಒಪ್ಪಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು.