ಬಳ್ಳಾರಿಗೆ ಮಿತ್ತಲ್ ಕಂಪೆನಿ ಬರಲಿದೆ :ರೆಡ್ಡಿ
ಗೃಹ ಕಚೇರಿ 'ಕುಟೀರ'ದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲಕ್ಷ್ಮಿಮಿತ್ತಲ್, ಬ್ರಹ್ಮಿಣಿ, ಎನ್ಎಂಡಿಸಿ, ಲಾಜಿಸ್ಟಿಕ್ನ 2 ಪಾರ್ಕ್ ಸೇರಿ ವಿದೇಶೀ ಉಕ್ಕು ಕಾರ್ಖಾನೆ ಪ್ರಾರಂಭ ಆಗಲಿದೆ. ಈ ಉದ್ಯಮಗಳು ಪ್ರಾರಂಭ ಆದಲ್ಲಿ 2 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಅಗಲಿದೆ ಎಂದರು.
ಸಿರುವಾರ-ಚಾಗನೂರು ಗ್ರಾಮ ವ್ಯಾಪ್ತಿಯ 900 ಎಕರೆ ಭೂಮಿಯಲ್ಲಿ 250 ಕೋಟಿ ರು. ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ 'ಮಾರ್ಗ್' ನಿರ್ಮಾಣ ಸಂಸ್ಥೆ ಟೆಂಡರ್ ಪಡೆದಿದೆ. ಈ ಭೂಮಿ ಸಂತ್ರಸ್ತರಿಗಾಗಿ 50 ಕೋಟಿ ರು. ಪರಿಹಾರ ಪಾವತಿ ಆಗುತ್ತಿದೆ. ಹೆಚ್ಚುವರಿ 50 ಕೋಟಿ ರು. ಶೀಘ್ರದಲ್ಲೇ ಪಾವತಿ ಆಗಲಿದೆ. ಈ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿ ಇದೆ ಎಂದರು.
ಪ್ರವಾಸಿ ಸೌಧ: ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಬಳ್ಳಾರಿ, ಗುಲ್ಬರ್ಗಾ, ಬೀದರ್ ಜಿಲ್ಲೆಗಳಲ್ಲಿ ಅತ್ಯಾಧುನಿಕ 'ಪ್ರವಾಸಿಸೌಧ'ಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ನಿಗದಿತ ಸಮಯದಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಕಂಪ್ಲಿ ಕ್ಷೇತ್ರದ ಶಾಸಕ ಟಿ.ಹೆಚ್. ಸುರೇಶಬಾಬು ಮತ್ತಿತರರು ಉಪಸ್ಥಿತರು.