ರೈತರ ಮೇಲಿನ ಕೇಸ್ ವಾಪಸ್ಸು
ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹಾವೇರಿ, ದಾವಣಗೆರೆ, ಧಾರವಾಡ, ತುಮಕೂರು, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ರಸಗೊಬ್ಬರಕ್ಕಾಗಿ ನಡೆಸಿದ ಚಳವಳಿಗೆ ಸಂಬಂಧಿಸಿದಂತೆ ರೈತರ ಮೇಲೆ ಹೂಡಲಾಗಿದ್ದ ಎಲ್ಲ ಕೇಸ್ ಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಹಿಂದಿನ ಕೆಲವು ಮೊಕದ್ದಮೆಗಳನ್ನೂ ವಾಪಸ್ಸು ಪಡೆದಿರುವ ಸರಕಾರ ಅವುಗಳ ವಿವರವನ್ನು ಬಹಿರಂಗಪಡಿಸಿಲ್ಲ. ಆದರೆ, ಅವೆಲ್ಲವೂ ರೈತರ ಮೇಲಿನ ಕೇಸ್ ಗಳು ಎನ್ನುವುದು ಖಚಿತವಾಗಿದೆ.
ಸಚಿವ ಸಂಪುಟದ ನಂತರ ಗೃಹ ಸಚಿವ ವಿ ಎಸ್ ಆಚಾರ್ಯ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು. ಅಶ್ರಯ ಮನೆಗಳ ನಿರ್ಮಾಣಕ್ಕಾಗಿ ನೀಡಿದ ಸಾಲದ ಮೇಲಿನ ಬಡ್ಡಿ ಮನ್ನಾ, ಡಿಸೆಂಬರ್ ಒಳಗೆ ಅಸಲು ಪಾವತಿ ಮಾಡಿದವರಿಗೆ ಬಡ್ಡಿ ಮನ್ನಾ. ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ತುಂಗಭದ್ರಾ ಯೋಜನೆಯ ವಿತರಣಾ ಕಾಲುವೆಗಳ ಅಧುನೀಕರಣ ಕಾಮಗಾರಿಗೆ 251.29ಕೋಟಿ ರುಪಾಯಿ.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ವಿದ್ಯನ್ಮಾನ ಮತಯಂತ್ರಗಳ ಬಳಕೆ. ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ.33 ರಿಂದ 50ಕ್ಕೆ ಹೆಚ್ಚಿಸಲು ಪಂಚಾಯಿತಿ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ. ಅಬಕಾರಿ ಕರ ವಸೂಲಿ ಕರಸಮಾಧಾನ-3 ಆದೇಶ ಹೊರಬಿದ್ದ 3 ತಿಂಗಳಲ್ಲಿ 3 ಕಂತುಗಳಲ್ಲಿ ಅಸಲು ಮರುಪಾವತಿ ಮಾಡಿದರೆ ಬಡ್ಡಿ ಮನ್ನಾ. 4 ಲಕ್ಷ ಬಡವರಿಗೆ ನಿವೇಶನ. ಮೈಸೂರು, ಹಿರಿಯೂರು ಶಿರಸಿ, ಕೊಪ್ಪಳದಲ್ಲಿ ತೋಟಗಾರಿಕಾ ಕಾಲೇಜುಗಳು ಇದೇ ಶೈಕ್ಷಣಿಕ ಸಾಲಿನಿಂದ ಆರಂಭಿಸಲಾಗುವುದು ಸಚಿವರು ಹೇಳಿದರು.