ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ ಕಂಡಂತೆ ನಾನು ನನ್ನ ಕನಸು

By ಮೃತ್ಯುಂಜಯ ಕಲ್ಮಠ
|
Google Oneindia Kannada News

ದಂಪತಿಗಳಿಬ್ಬರೂ ಎಂಎನ್ ಸಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳು. ಪತಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವಾತ. ಪತ್ನಿ ಕೂಡಾ ದೇಶಿಯ ಸಾಫ್ಟ್ ವೇರ್ ಕಂಪನಿಯಲ್ಲಿ ಸೀನಿಯರ್ ಟೆಕ್ಕಿ. ತಿಂಗಳಿಗೆ ಲಕ್ಷಾಂತರ ರುಪಾಯಿ ರೊಕ್ಕ ಬೇರೆ. ಓಡಾಡಲು ಸ್ವಿಫ್ಟ್ ಕಾರು. ಬೆಂಗಳೂರಿನಂತ ಅರಮನೆಯಲ್ಲಿ ಸ್ವಂತ ಮನೆ. ವಯಸ್ಸು ಮೂವತ್ತೇರಡು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತ ಬಾಳು. ದಾಂಪತ್ಯದ ಫಲವಾಗಿ ಒಂದು ಹೆಣ್ಣು ಮಗು. ನಾವಿಬ್ಬರೂ ನಮಗೊಂದೇ ಸಾಕು ಎಂಬಂತಹ ಪ್ರಾಕ್ಟಿಕಲ್ ಲೈಫು. ಇಬ್ಬರು ಪರಸ್ಪರ ಒಪ್ಪಂದ ಮೇರೆಗೆ ಆಪರೇಷನ್ ಮಾಡಿಸಿಕೊಂಡಿದ್ದೂ ಆಯಿತು. ಫೈನ್...

ಈ ಎರಡು ವರ್ಷದಲ್ಲಿ ಈ ಸುಖಿ ದಂಪತಿಗಳು ಜಗತ್ತನ್ನು ಸುತ್ತಿದ್ದೂ ಆಯಿತು. ಅಪರೂಪಕ್ಕೆ ಸಿಕ್ಕಾಗೆಲ್ಲಾ ಹೆಂಗಲೇ ಪುಟ್ಟಿ ಅಂದ್ರ, ಲೇ ಪುಟ್ಟಿನ ಐಐಟಿ ಇಂಜಿನಿಯರ್ ಮಾಡಿಸಿಬೇಕು ಅಂತೀನಿ. ಆಕೀನ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಕಳಿಸೋದಿಲ್ಲ. ಸ್ವಂತ ಕಂಪನಿ ಓಪನ್ ಮಾಡ್ತೀನಿ. ಅದರೊಳಗೆ ನೀನು ಪಿಆರ್ಓ ಆಗಿ ಬಂದುಬಿಡ್ಲೆ ಅಂತ ಜೋಕ್ ಮಾಡ್ತಿದ್ದ. ಸಾಮಾನ್ಯ ರೈತ ಕುಟುಂಬದಿಂದ ಬಂದಂತಹ ಸಾಧಾರಣ ವ್ಯಕ್ತಿ, ಎಲ್ಲರೂ ನಿಂತು ನೋಡುವಂಗ ಜೀವನ ಮಾಡ್ತಿದ್ದ.

ಆದರೆ, ಸ್ನೇಹಿತನ ಈ ಸಂಭ್ರಮದ ಜೀವನವನ್ನು ಆ ದೇವರಿಗೂ ನೋಡಲಿಕ್ಕೆ ಸಾಧ್ಯವಾಯಿತೋ ಇಲ್ಲವೋ ಗೊತ್ತಿಲ್ಲ. ಎರಡು ವರ್ಷದ ಕಂದಮ್ಮನಿಗೆ ಬ್ಲಡ್ ಕ್ಯಾನ್ಸರ್. ಇದನ್ನು ಕೇಳಿದ ಆ ಯುವ ಟೆಕ್ಕಿಗಳಿಗೆ ಹೇಗಾಗಬೇಡ ಹೇಳಿ. ಮನುಷ್ಯನಿಗೆ ಕಷ್ಟದ ದಿನಗಳು ಬಂದಾಗ ಸಾಂತ್ವನ ಹೇಳಲು ಯಾರಾದರೂ ಬೇಕಾಗುತ್ತಾ ? ಗೊತ್ತಿಲ್ಲ. ಪುಟ್ಟಿನ ಐಐಟಿಯಲ್ಲಿ ಓದಿಸಬೇಕು ಎಂಬಂತ ಮಾತಿನ ಜಾಗದಲ್ಲಿ ಕಿಮೋಥೇರಪಿ ಮಾಡಿಸಬೇಕು ಎಂಬ ಮಾರಿ ಬಂದು ಕೂತಿದೆ. ನೀರನ್ನೂ ಅಳೆದು ತೂಗಿ ಕುಡಿಯುವ ಅವನು ಇದೀಗ ಕುಡಿತ ಬೆನ್ನುಬಿದ್ದಿದೆ. ಎಲ್ಲಕ್ಕಿಂತ ಜೀವನ ದೊಡ್ಡದು ಮಾರಾಯ. ಹಣಬರಹದಲ್ಲಿರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ದೇವರ ಮೇಲೆ ಭಾರ ಹಾಕು ಅಂದೆ. ಜೋರಾಗಿ ಅಳಲು ಶುರು ಮಾಡಿದೆ. ಆಯಾಮ್ ಹೆಲ್ಫ್ ಲೆಸ್. ಇದೆಲ್ಲಾ ನಡೆದದ್ದು, ನಾನು ನನ್ನ ಕನಸು ಚಿತ್ರ ವೀಕ್ಷಣೆಗೆ ತೆರಳಿದಾಗ.

ಏನನ್ನೂ ಬರೆಯಬೇಕೆಂದುಕೊಂಡವನು, ಏನೇನೂ ಬರೆಯತೊಡಗಿದೆ, ಸಾರಿ. ನಾನು ಇಷ್ಟಪಡುವ ಕಲಾವಿದರ ಪೈಕಿ ಪ್ರಕಾಶ್ ರೈ ಕೂಡ ಒಬ್ಬರು. ಅವರ ನಟಿಸಿ ನಿರ್ದೇಶಿಸಿದ ನಾನು ನನ್ನ ಕನಸು ಚಿತ್ರವನ್ನು ಮೊನ್ನೆ ಶನಿವಾರ ಭೂಮಿಕ ಚಿತ್ರಮಂದಿರದಲ್ಲಿ ನೋಡಿದೆ. ನನಗ್ಯಾಕೋ ಆ ಚಿತ್ರ ನೋಡುತ್ತಿರುವಾಗ ಕಣ್ಣಲ್ಲಿ ದಳದಳಂತ ನೀರು. ಪ್ರತಿ ಸೀನ್ ನಲ್ಲಿಯೂ ಟೆಕ್ಕಿ ಗೆಳೆಯ ಮಗು ಪುಟ್ಟಿ ನೆನಪಿಗೆ ಬರುತ್ತಿತ್ತು. ಟೆಕ್ಕಿ ಅನುಭವಿಸುತ್ತಿರುವ ನೋವು, ಯಾತನೆ ಅವನಿಗೆ ಮಾತ್ರ ಗೊತ್ತು. ಗೆಳೆಯ ಕೂಡಾ ಪುಟ್ಟಿಯನ್ನ ತುಂಬಾ ಪ್ರೀತಿಸುತ್ತಾನೆ ಈಗಲೂ ಕೂಡಾ. ಅವಳು ಗುಣಮುಖಳಾಗುತ್ತಾಳೆ ಅಂದ್ರೆ ದುಡ್ಡು ಸುರಿಯಲು ರೆಡಿ. ಆದರೆ, ಸದ್ಯದ ಮಟ್ಟಿಗೆ ಕಂದ ಓಕೆ. ಮುಂದಿನ ಹೇಗೂ ಗೊತ್ತಿಲ್ಲ. ಎರಡನೇ ಕಿಮೋಥೇರಪಿ ಮುಗಿದಿದೆ.

ಒಬ್ಬ ತಂದೆ ಮಕ್ಕಳನ್ನು ಹೇಗೆಲ್ಲಾ ಪ್ರೀತಿಸುತ್ತಾರೆ. ಅವರಿಂದ ಏನೇನೆಲ್ಲಾ ಕಲಿಯಬೇಕಾಗುತ್ತದೆ. ಮಕ್ಕಳು ಜೊತೆಗೆ ಒಬ್ಬ ತಂದೆಯೂ ಹುಟ್ಟುತ್ತಾನೆ. ಅಲ್ಲಿಂದಲೇ ಹೊಸ ಹೊಸ ಪಾಠಗಳನ್ನ, ಅನುಭವಗಳನ್ನು ಜೀವನ ಹೇಗೆ ಕಲಿಸುತ್ತೆ ಎಂಬ ಸಂಗತಿಯನ್ನು ರೈ ಸಕ್ಕತ್ತಾಗಿ ತೆರೆ ಮೇಲೆ ತಂದಿದ್ದಾರೆ. ಕೂದಲು ಕೂಡ ಕೊಂಕದಂತೆ, ಮಗುವಿನ ಬೇಕು ಬೇಡಗಳನ್ನು ಕ್ಷಣಾರ್ಧದಲ್ಲಿ ಈಡೇರಿಸುವ ಅಪ್ಪನಿಗೆ ಅದೇ ಮಗಳು, I know, what i am doing ಎಂದು ಕಪಾಳಕ್ಕೆ ಹೊಡೆದ ಹಾಗೆ ಅಂದ್ರೆ ಹೆಂಗಿರುತ್ತೆ.

ಕಾಲೇಜಿಗೆ ಹೋದ ಮಗಳು ಬರುವಾಗ ಮನೆಯವರ ಅನುಮತಿ ಇಲ್ಲದೇ ಬಾಳ ಸಂಗಾತಿಯನ್ನೂ ಆಯ್ಕೆ ಮಾಡಿಕೊಂಡ ಬಂದರೆ ? ಜೀವನವೇ ಆ ಮಗು ಎಂದು ಬಾಳುತ್ತಿರುವ ತಂದೆಯ ಸ್ಥಿತಿ ಹೆಂಗಿರಬಹುದು. ಪ್ರೀತಿಸುವುದು, ಮದುವೆಯಾಗುವುದು ತಪ್ಪಲ್ಲ. ಆದರೆ, ಸಾಕಿ ಸಲುಹಿ ದೊಡ್ಡರನ್ನಾಗಿ ಮಾಡಿ, ವಿದ್ಯಾಭ್ಯಾಸ ಕೊಡಿಸಿ, ನೌಕರಿಗೂ ಹಚ್ಚಿ ಮಕ್ಕಳ ಬಾಳು ಚೆನ್ನಾಗಿರಲಿ ಎಂದು ಹಾರೈಸುವ ತಂದೆ ತಾಯಿಗಳಿಗೆ ಮಕ್ಕಳೂ ಕೂಡ ಅವರ ಬಗ್ಗೆ ಕ್ಷಣಕಾಲ ಚಿಂತಿಸಬೇಕು ಎನ್ನುವುದನ್ನ ರೈ ಮನತಟ್ಟುವಂತೆ ಚಿತ್ರಿಸಿದ್ದಾರೆ.

ನಾನು ನನ್ನ ಕನಸು ಚಿತ್ರದಲ್ಲಿ ಬ್ರಿಜೇಶ್ ಪಟೇಲ್ ಪಾತ್ರ ಚಿತ್ರದ ಪ್ರಮುಖ ಹೈಲೈಟ್, ತಂದೆ ಕ್ಯಾರೆಕ್ಟರ್ ಹೊರತುಪಡಿಸಿದರೆ, ಬ್ರಿಜೇಶ್ ಪಟೇಲಿಂದೆ ಕಾರುಬಾರು. ಉತ್ತರ ಕರ್ನಾಟಕ ಭಾಷೆಯನ್ನು ಸಮರ್ಥವಾಗಿ ಬಳಿಸಿಕೊಂಡಿರುವ ರೈ ಕುಸುರಿ ಅಡ್ಡಿಯಿಲ್ಲ. ಕನಸು ಪಾತ್ರವನ್ನು ಇನ್ನಷ್ಟು ಮನಮುಟ್ಟುವಂತೆ ಚಿತ್ರಿಸಬಹುದಿತ್ತು. ಅಮೂಲ್ಯ ಇನ್ನು ನಟನೆಯಲ್ಲಿ ಬಾಳ ಪಳಗಬೇಕು. ಕಲ್ಪನಾ ಪಾತ್ರದಾರಿ ಹಿರಿಯ ಸಿತಾರಾ ನಟನೆ ಓಕೆ ಎನ್ನುವಂತೆ ನಟಿಸಿದ್ದಾರೆ. ಹರ್ಭಜನ್ ಸಿಂಗ್ ನಂತೆ ಇರುವ ಜೋಗಿಂದರ್ ಸಿಂಗ್ ಆಯ್ಕೆ ರೈ ಟೇಸ್ಟ್ ಗೆ ಹಿಡಿದ ಸಾಕ್ಷಿ. ಉಳಿದಂತೆ ಜಸ್ಬೀರ್ ಕೌರ್, ಬಲ್ಲೆ ಬಲ್ಲೆ ಮಂದಿ ಕುಣಿತ ಸಹ್ಯವೆನಿಸುತ್ತೆ.

ಉಳಿದಂತೆ ಪ್ರಕಾಶ್ ರೈ ಉತ್ತಮ ಕಲಾವಿದ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಆದರೆ, ನಿರ್ದೇಶಕನಾಗಿ ಅವರ ಅನೇಕ ಕಡೆಗಳಲ್ಲಿ ಎಡವಿದ್ದಾರೆ. ಮಡಿಕೇರಿ, ಚಿಕ್ಕಮಗಳೂರು ಕಾಫಿ ಎಸ್ಟೇಟ್ ಹೊರತುಪಡಿಸಿ ಬೇರೆ ಎಲ್ಲೂ ಚಿತ್ರಿಕರಿಸಿಲ್ಲ. ಚಿತ್ರದ ಪ್ರಮುಖ ವೀಕ್ ನೆಸ್ ಅಂದರೆ, ಕನಸು ದಿಲ್ಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಸ್ಟಡೀಸ್ಗೆ ತೆರಳುವುದು. ರೈಲ್ವೆ ನಿಲ್ದಾಣದಲ್ಲಿ ಮಗಳನ್ನು ಟಾಟಾ ಮಾಡಿ ದಿಲ್ಲಿಗೆ ಕಳುಹಿಸೋದು. ನಂತರ ಆಕೆ ಅಲ್ಲಿಂದ ಫೋನ್ ಮಾಡೋದು. ಮರುಕ್ಷಣವೇ ಆಕೆ ದಿಲ್ಲಿಯಿಂದ ಬರೋದು. ತನ್ನ ಪ್ರೀತಿ ಪ್ರಕರಣವನ್ನು ಹೇಳುವುದು. ತಂದೆ ಚಡಪಡಿಸುವುದು ಪ್ರಸಂಗಗಳನ್ನು ಇನ್ನು ಪ್ರ್ಯಾಕ್ಟಿಕಲ್ ಆಗಿ ಬಳಸಿಕೊಳ್ಳಬಹುದಿತ್ತು. ಕೊನೆ ಪಕ್ಷ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಯಲವನ್ನಾದರೂ ತೋರಿಸಬಹುದಿತ್ತು ಅಲ್ವೆ ರೈ ಅವರೇ.

ಜೋಗಿಂದರ್ ಸಿಂಗ್ ಇಂಡಿಪೆಂಡೆಂಟ್ ಜರ್ನಲಿಸ್ಟ್ ಕೆಲಸ ಮಾಡುತ್ತಿರುವುದು. ಅವರಿಬ್ಬರೂ ಭೇಟಿ ಆಗಿದ್ದು ಎಲ್ಲಿ, ಮಾತುಕತೆ, ಪ್ರೀತಿಗಳ ಸುದ್ದಿಯೇ ಚಿತ್ರದಲ್ಲಿಲ್ಲ. ಜೋಗಿ ಪ್ಲಾನಿಂಗ್ ಕಮೀಷನ್ ಸದಸ್ಯ. ಆದರೆ, ಅವರಿಗೆ ಸ್ವತಃ ಪ್ರಧಾನಮಂತ್ರಿಯೇ ಪೋನಾಯಿಸುವುದು ಅತಿರೇಕ ಅನಿಸುತ್ತೆ. ಮಗಳನ್ನು ಅಷ್ಟೊಂದು ಪ್ರೀತಿಸುವ ತಂದೆ ಕೊನೆಯದಾಗಿ ಆಕೆ ಗಂಡ ಜೊತೆಗೆ ಹೋಗುವಾಗ ತಂದೆ ಟಾಟಾ ಹೇಳಿ ನಗುತ್ತಾ ಹೊರಟು ಹೋಗುವುದು ಸೀನ್ ಮಾತ್ರ ತುಂಬಾ ಚೆಂದವಾಗಿದೆ.

ನಾನ್ಯಾಕೆ ನಕ್ಕೆ ಅಂತ ನನಗೆ ಗೊತ್ತಿಲ್ಲ. ಬೆಳೆದ ನಿಂತ ಮಗಳು ತನಗೆ ಸೂಟಾಗುವ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಳಲ್ಲ ಎಂಬ ಸಂತಸವೇ ಗೊತ್ತಿಲ್ಲ. ಆದರೆ, ರೈ ಮಾತ್ರ ಮನೆ ಮನೆಮಂದಿಯೆಲ್ಲಾ ಕೂತು ನೋಡುವಂತ ಸದಬಿರುಚಿ ಚಿತ್ರವನ್ನು ನೀಡಿದ್ದಾರೆ. ಅಲ್ಲಿಲ್ಲಿ ಇರುವ ಲೋಪಗಳು ಇವೆ. ಕಡಿಮೆ ಬಜೆಟ್ ನಲ್ಲಿ ಮೃಷ್ಟಾನ ನೀಡಿದ್ದಾರೆ. ಕುಟುಂಬ ಸಮೇತರಾಗಿ ಒಂದು ಕನಸು ನೋಡಿಕೊಂಡು ಬನ್ನಿ. ನಿಮ್ಮ ಮನೆಯಲ್ಲಿರುವ ಕನಸು ಎಂಬ ಪುಟ್ಟಿಯ ಬಗ್ಗೆ ಒಂದು ಐಡಿಯಾ ಸಿಗುತ್ತೆ. ಮಾಮರದಲ್ಲೊಂದು ಗುಬ್ಬಿ ಗೂಡು ಗೀತೆ ಗುನುಗುವ ಹಂಗಿದೆ. ಹಂಸಲೇಖ ಸಂಗೀತ ಸೂಪರ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X