ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಗಿರಿಯಲ್ಲಿ ಎಚ್ಡಿಕೆ ವಿರೋಧದ ಪ್ರತಿಧ್ವನಿ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

HD Kumarswamy
ರಾಮಗನರ, ಮೇ 24 : ರಾಮನಗರದ ರಾಮದೇವರಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅನಂತರ ಹಾಸ್ಪಿಟಾಲಿಟಿ ಎಂಬ ಸಂಸ್ಥೆ ರೆಸಾರ್ಟ್ ನಿರ್ಮಾಣ ಮಾಡುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇ 26ರಂದು ಸಾರ್ವಜನಿಕರ ಮತ್ತು ರೆಸಾರ್ಟ್ ನಿರ್ಮಾಣ ಮಾಡುತ್ತಿರುವ ಸಂಸ್ಥೆಯ ಸದಸ್ಯರ ಮತ್ತು ಅಧಿಕಾರಿಗಳ ಸಭೆ ಕರೆದು ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಕ್ಷೇತ್ರದ ಪ್ರತಿನಿಧಿಯಾಗಿ ಬದುಕಿರುವವರೆಗೂ ಕಾನೂನು ಬಾಹಿರವಾಗಿ ಇಂತಹ ರೆಸಾರ್ಟ್ ನಿರ್ಮಾಣ ಮಾಡಲು ಬಿಡುವುದಿಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ರಾಮಾಯಣ ಕಾಲದಲ್ಲಿ ಶ್ರೀರಾಮಸೀತೆ ಲಕ್ಷ್ಮಣರು ವನವಾಸಕ್ಕೆ ಬಂದಾಗ ಇಲ್ಲಿ ಬಂದಿದ್ದರೆಂಬ ಪುರಾಣವಿರುವ ಮತ್ತು ಅಳಿವಿನ ಅಂಚಿನಲ್ಲಿರುವ ಅಪರೂಪದ ರಣಹದ್ದುಗಳ ವಾಸಸ್ಥಾನವಾಗಿರುವ ಶೋಲೆಬೆಟ್ಟದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ರೆಸಾರ್ಟ್‌ನ ವಿವಾದಿತ ಸ್ಥಳಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆ ತಂದು ರೆಸಾರ್ಟ್ ನಿರ್ಮಾಣ ಮಾಡುತ್ತಿರುವುದರ ವಿರುದ್ದ ಇದೇ ಮೇ 24ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಹೋರಾಟ ನಡೆಸುತ್ತಿರುವ ಪರಿಸರಪ್ರಿಯರ ಪರವಾಗಿ ವಕೀಲರನ್ನು ನೇಮಿಸಿ ಅಕ್ರಮ ಮಾಡಿರುವುದರ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗುವುದೆಂದು ಎಚ್ಡಿಕೆ ಹೇಳಿದರು.

ಸಚಿವರುಗಳ ಒತ್ತಡ ತಂದು ರೆಸಾರ್ಟ್ ನಿರ್ಮಾಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ನನ್ನ ಆಡಳಿತಾವಧಿಯಲ್ಲಿ ಪ್ರವಾಸಿ ತಾಣ ಮಾಡುವ ನಿಟ್ಟಿನಲ್ಲಿ ಒಂದೂವರೆ ಕೋಟಿಯನ್ನು ಈ ಸ್ಥಳ ಅಭಿವೃದ್ದಿಗೊಳಿಸಲು ನೀಡಲಾಗಿತ್ತು. ಆದರೆ ಈಗ ಖಾಸಗಿಯರವರು ಪ್ರಭಾವ ಬಳಸಿ ಸರ್ಕಾರದ ಅಧೀನದಲ್ಲಿರುವ ಪವಿತ್ರ ಭೂಮಿಯನ್ನು ಅಪವಿತ್ರಗೊಳಿಸಲು ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದ ಸ್ಥಳದಲ್ಲೇ ಹಾಜರಿದ್ದ ಅನಂತರ ಹಾಸ್ಪಿಟಾಲಿಟಿ ಸಂಸ್ಥೆಯ ನಿರ್ದೇಶಕ ರವಿಶಂಕರ್‌ರವರನ್ನು ಕುಮಾರಸ್ವಾಮಿಯವರು ತರಾಟೆಗೆ ತೆಗೆದುಕೊಂಡರು. ಕಂದಾಯ ಅಧಿಕಾರಿಗಳಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಕ್ರಮವೆಸಗಿರುವ ಸಂಸ್ಥೆ ವಿರುದ್ದ ಸೂಕ್ತ ದಾಖಲೆ ನ್ಯಾಯಾಲಯಕ್ಕೆ ಒದಗಿಸುವಂತೆ ಸೂಚಿಸಿದರು.

ಭೇಟಿ ಸಂಧರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬ್ಯಾಟಪ್ಪ, ಶಾಸಕ ಕೆ.ರಾಜು, ನರೇಂದ್ರ, ಚಂದ್ರಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಜಯಚಂದ್ರ, ನಾಗರಾಜ್, ಕೂಟಗಲ್ ದೇವೇಗೌಡ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X