ವಿಮಾನ ದುರಂತ : ತಲಾ 10 ಲಕ್ಷ ರು. ಪರಿಹಾರ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಾದವ್, ಘಟನೆಯಲ್ಲಿ 158 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 146 ಮೃತದೇಹಗಳನ್ನು ಗುರುತಿಸಲಾಗಿದೆ. 12 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ, ಮೃತಪಟ್ಟಿರುವ ಎಲ್ಲ 158 ದೇಹಗಳನ್ನು ದೊರೆತಿವೆ. 87 ದೇಹಗಳನ್ನು ಮೃತರ ಸಂಬಂಧಿಕರಿಗೆ ನೀಡಲಾಗಿದೆ ಎಂದರು.
ಈಗಾಗಲೇ ಪ್ರಧಾನಮಂತ್ರಿಗಳು ಘೋಷಣೆ ಮಾಡಿದಂತೆ ಮೃತರಿಗೆ ತಲಾ ಏರಡು ಲಕ್ಷ ಹೊರತುಪಡಿಸಿ ಸತ್ತವರು ವಯಸ್ಕರಾಗಿದ್ದರೆ ಅಂತವರ ಕುಟುಂಬಕ್ಕೆ 10 ಲಕ್ಷ ರುಪಾಯಿ ಮಧ್ಯಂತರ ಪರಿಹಾರ ನೀಡಲಾಗುವುದು. 12 ವರ್ಷದೊಳಗಿನ ಮಕ್ಕಳಿಗೆ 5 ಲಕ್ಷ ರುಪಾಯಿ ಮತ್ತು 2 ಲಕ್ಷ ರುಪಾಯಿ ಗಾಯಗೊಂಡವರ ಕುಟುಂಬಗಳಿಗೆ ನೀಡಲಾಗುವುದು ಜಾದವ್ ಸ್ಪಷ್ಟಪಡಿಸಿದರು.
ಘಟನೆಗೆ ತೀವ್ರ ನೋವು ವ್ಯಕ್ತಪಡಿಸಿದ ಜಾದವ್, ಮೇಲ್ನೋಟಕ್ಕೆ ಪೈಲೆಟ್ ನ ಅಚಾತುರ್ಯವೇ ಕಾರಣ ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಲಿದೆ. ಈ ಘಟನೆ ಬಗ್ಗೆ ಏರ್ ಇಂಡಿಯಾ ಸಮೂಹ ತೀವ್ರ ನೊಂದಿದೆ ಎಂದು ಅವರು ಹೇಳಿದರು. ವಿಮಾನ ಅಪಘಾತ ಮಾಹಿತಿ ತಿಳಿದ ತಕ್ಷಣ ಮಂಗಳೂರು ಹಾಗೂ ಸುತ್ತಮುತ್ತಲಿನ ಜನರು ಪರಿಹಾರಕ್ಕೆ ಕೈಜೋಡಿಸಿದ್ದಕ್ಕೆ ತುಂಬಾ ಸಂತಸ ವ್ಯಕ್ತಪಡಿಸಿದ ಅವರು, ಸ್ವಯಂ ಘೋಷಿತವಾಗಿ ಜನರು ಬಂದು ಪರಿಹಾರ ಕಾರ್ಯಕ್ಕೆ ನೆರವಾದರು. ಮೃತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುತ್ತೇವೆ ಎಂದು ಜಾದವ್ ವಿವರಿಸಿದರು.