ನಕ್ಸಲೀಯರನ್ನು ಮನುಷ್ಯರಂತೆ ಕಾಣಿ: ಮೋದಿ
ಹಿಂದುತ್ವದ ಪರ ಹಾಗೂ ಕಾಂಗ್ರೆಸ್ ಧೋರಣೆ ವಿರುದ್ಧ ಕಿಡಿಕಾರುತ್ತಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಕ್ಸಲೀಯರು ಬಗ್ಗೆ ಮೃದು ಧೋರಣೆ ತಾಳಿದ್ದಾರೆಯೇ ಎಂಬ ಶಂಕೆ ಮೂಡುವಂತೆ, ನಕ್ಸಲೀಯರು ನಮ್ಮ ನಡುವೆಯೇ ಇರುವ ಜನರಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಅವರೊಂದಿಗೆ ಮೊದಲು ಮಾತುಕತೆಗೆ ಮುಂದಾಗಬೇಕು ಎಂದು ಸಲಹೆ ನೀಡುವ ಮೂಲಕ ಬಿಜೆಪಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ.
ಅಲಿಘಡನ ಸಮಾರಂಭಕ್ಕೆ ಆಗಮಿಸಿದ್ದ ಮೋದಿ, ನಕ್ಸಲೀಯರಿಗೆ ಹಿಂಸಾಚಾರವನ್ನು ಕೈಬಿಡುವಂತೆ ಮನವೊಲಿಸಬೇಕು. ಹಿಂಸೆಯಿಂದ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಿ ಹೇಳಬೇಕು. ಆ ನಿಟ್ಟಿನಲ್ಲಿ ನಕ್ಸಲೀಯರೊಂದಿಗೆ ಮಾತುಕತೆ ನಡೆಸುವುದೇ ಉತ್ತಮವಾದ ಮಾರ್ಗ ಎಂದು ಹೇಳಿದರು.
ನಕ್ಸಲೀಯರ ಪರವಾದ ನರೇಂದ್ರ ಮೋದಿಯವರ ಹೇಳಿಕೆ ಬಿಜೆಪಿಗೆ ಅಚ್ಚರಿ ತಂದಿದೆ. ನಕ್ಸಲ್ ದಮನ ಮಾಡುವಲ್ಲಿ ಯುಪಿಎ ಸರ್ಕಾರ ಮೃದು ಧೋರಣೆ ತೋರುತ್ತಿದೆ ಎಂದು ಬಿಜೆಪಿ ಸದಾ ಆರೋಪಿಸುತ್ತಾ ಬಂದಿತ್ತು.ಇತ್ತೀಚೆಗೆ ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್, ನಕ್ಸಲೀಯರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು.