ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ?
ಜೂನ್ 7 ರಂದು ಕೇಂದ್ರ ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಸಚಿವ ಸಮೂಹ (EGoM)ಸಭೆ ಸೇರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ ಕನಿಷ್ಠ2 ರಿಂದ 3 ರು. ಹೆಚ್ಚಳ ಮಾಡುವ ಖಚಿತ ತೀರ್ಮಾನಕ್ಕೆ ಬರಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಸಲಿಗಿಂತ ಕಡಿಮೆ ಬೆಲೆಗೆ ಸೀಮೆಣ್ಣೆ ಮತ್ತು ಅಡುಗೆ ಅನಿಲವನ್ನು ಮಾರಾಟದಿಂದ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಕೈಗೊಳ್ಳಬೇಕಾದ ಕ್ರಮ,ಪೆಟ್ರೋಲ್ -ಡೀಸೆಲ್ ಮೇಲಿನ ನಿಯಂತ್ರಣ ದರವನ್ನು ತೆಗೆದುಹಾಕುವುದು. ತೈಲ ಕಂಪೆನಿಗಳಿಗೆ ಉಂಟಾಗುತ್ತಿರುವ ನಷ್ಟವನ್ನು ತಪ್ಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.
ಈ ನಿಟ್ಟಿನಲ್ಲಿ ತೈಲ ಬೆಲೆ ಹೆಚ್ಚಳ ಅನಿವಾರ್ಯ ಎನ್ನಲಾಗಿದೆ. ಕೇಂದ್ರ ಸರ್ಕಾರ ಈಗಾಗಲೆ ನೈಸರ್ಗಿಕ ಅನಿಲ ಬೆಲೆಯನ್ನು ಕ್ಯೂಬಿಕ್ ಲೀಟರ್ ಗೆ 3,200 ರು ಗಳಿಂದ 6,818 ರು. ಗಳಿಗೆ ಏರಿಸಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ರಸಗೊಬ್ಬರ ಬೆಲೆ ಹೆಚ್ಚಳವಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ತೈಲ ಕಂಪೆನಿಗಳ ಕಣ್ಣೀರಧಾರೆ: ದೇಶದ ಮೂರು ಸರ್ಕಾರಿ ತೈಲ ಮಾರಾಟ ಕಂಪೆನಿಗಳಾದ ಇಂಡಿಯನ್ ಆಯಿಲ್ , ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಂಪೆನಿಗಳು ಅಸಲಿಗಿಂತ ಕಡಿಮೆ ಬೆಲೆಗೆ ತೈಲ ಮಾರಾಟ ಮಾಡುತ್ತಿರುವುದರಿಂದ ಪ್ರತೀ ನಿತ್ಯ 2,555 ಕೋಟಿ ರುಪಾಯಿಗಳಷ್ಟು ನಷ್ಟ ಅನುಭವಿಸುತ್ತಿವೆ. ಈ ಹಣಕಾಸು ವರ್ಷಾಂತ್ಯದ ವೇಳೆಗೆ ನಷ್ಟ 90,000 ಕೋಟಿ ರೂಪಾಯಿಗಳನ್ನು ಮೀರಲಿದೆ ಎನ್ನಲಾಗಿದೆ. ಉನ್ನತ ಮಟ್ಟದ ಸಚಿವರ ಸಮಿತಿ ಬೆಲೆಯನ್ನು ನಿಯಂತ್ರಿಸುವ ನೀತಿ ಮತ್ತು ಬೆಲೆ ನಿಯಂತ್ರಣ ರದ್ದತಿ ಬಗ್ಗೆಯೂ ಪರಿಶೀಲನೆ ನಡೆಸಲಿದ್ದು, ಅಡುಗೆ ಅನಿಲ ಮತ್ತು ಸೀಮೆಣ್ಣೆ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಸುವ ಬಗ್ಗೆಯೂ ಪರಿಶೀಲಿಸಲಿದೆ .
ಬೆಲೆ ಏರಿಕೆ ನಿರ್ಧಾರ ಇವ ಕೈಲಿದೆ : ಪ್ರಣಬ್ ಮುಖರ್ಜಿ ಅಲ್ಲದೆ, ಈ ಸಚಿವ ಸಮೂಹ ಸಭೆಯಲ್ಲಿ ತೈಲ ಸಚಿವ ಮುರಳಿ ದಿಯೋರಾ, ಕೃಷಿ ಸಚಿವ ಶರದ್ ಪವಾರ್, ರಸಾಯನಿಕ ಹಾಗೂ ರಸಗೊಬ್ಬರ ಸಚಿವ ಎಂಕೆ ಅಳಗಿರಿ, ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಹೆದ್ದಾರಿ ಸಚಿವ ಕಮಲನಾಥ್ ಹಾಗೂ ಯೋಜನಾ ಆಯೋಗದ ಉಪ ನಿರ್ದೇಶಕ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಭಾಗವಹಿಸಲಿದ್ದಾರೆ.