ಭೀಕರ ಹತ್ಯಾಕಾಂಡ : ಪಿಎಂ ಜೊತೆ ಚಿದು ಚರ್ಚೆ
ಘಟನೆ ನಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೋಮವಾರ ನಡೆದ ಭೀಕರ ನರಮೇಧ ತೀವ್ರ ಆತಂಕದ ಸಂಗತಿ ಎಂದು ಹೇಳಿದರು. ನಕ್ಸಲ್ ಸಮಸ್ಯೆ ಹತ್ತಿಕ್ಕಲು ಇಲಾಖೆಗೆ ಇನ್ನಷ್ಟು ಶಕ್ತಿ ಬೇಕಿದೆ. ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸುವುದಾಗಿ ಅವರು ಹೇಳಿದರು.
ದಂತೇವಾಡ : ಮತ್ತೆ ಭೀಕರ ಹತ್ಯಾಕಾಂಡ
ಕೇವಲ 45 ದಿನದೊಳಗೆ ನಾಲ್ಕನೇ ಬಾರಿಗೆ ಹತ್ಯಾಕಾಂಡ ನಡೆಸಿರುವ ನಕ್ಸಲರು ಛತ್ತೀಸ್ ಗಢದ ದಂತೇವಾಡದಲ್ಲಿ ಸೋಮವಾರ ನೆಲ ಬಾಂಬ್ ಸ್ಫೋಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 50 ಜನರನ್ನು ಬಲಿ ತೆಗೆದುಕೊಂಡಿದ್ದಾರೆ.
ದಂತೇವಾಡ ಜಿಲ್ಲೆಯ ಗಡಿರಸ್ ಭುಸಾರಸ್ ನಡುವೆ ಸೋಮವಾರ ಸಂಜೆ 4.45ಕ್ಕೆ ಈ ಹತ್ಯಾಕಾಂಡ ನಡೆದಿದೆ. ಸುರಂಗದ ಮೂಲಕ ಟಾರ್ ರಸ್ತೆ ಮಧ್ಯೆ ಸುಧಾರಿತ ಸ್ಪೋಟಕಗಳನ್ನು ಅಳವಡಿಸಿದ್ದ ನಕ್ಸಲರು, ಗಡಿರಸ್ ಭುಸಾರಸ್ ಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಸ್ಫೋಟಕದ ಮೇಲೆ ಬರುತ್ತಿದ್ದಂತೆಯೇ ನಿಯಂತ್ರಣ ಸಾಧನದ ಮೂಲಕ ಸ್ಪೋಟಿಸಿದ್ದಾರೆ.
ನಕ್ಸಲ್ ದಮನ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ನೆರವು ನೀಡುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆದಿದೆ. ದಾಳಿಯಲ್ಲಿ 15 ವಿಶೇಷ ಪೊಲೀಸ್ ಅಧಿಕಾರಿಗಳು, 5 ಮಂದಿ ಸ್ಥಳೀಯ ಪೊಲೀಸರು ಮತ್ತು 30 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಸರಕಾರ ಕೈಗೊಂಡಿರುವ ನಕ್ಸಲ್ ದಮನ ಕಾರ್ಯಾಚರಣೆ ಖಂಡಿಸಿ ಛತ್ತೀಸ್ ಗಢ ಸೇರಿದಂತೆ ಐದು ರಾಜ್ಯಗಳಲ್ಲಿ ಮಂಗಳವಾರದಿಂದ 48 ಗಂಟೆಗಳ ಬಂದ್ ಗೆ ಮಾವೋವಾದಿಗಳು ಕರೆ ನೀಡಿದ್ದಾರೆ. ಬಂದ್ ಆರಂಭಗೊಳ್ಳುವ 12 ಗಂಟೆ ಮೊದಲು ರಕ್ತದೊಕುಳಿ ಹರಿಸಿದ್ದಾರೆ.