ಸವಣೂರು ಪುರಸಭೆಯಲ್ಲಿ ಲಂಚಾವತಾರ
ಗುರುವಾರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪಗಳಿಂದ ಭಾವಾವೇಶಕ್ಕೆ ಒಳಗಾಗಿದ್ದ ಮುಖ್ಯಾಧಿಕಾರಿಗಳು, ಸವಣೂರ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೇ ಸ್ವಯಂ ದೂಷಣೆ ಮಾಡಿಕೊಂಡರು. ಸದಸ್ಯರ ಅವ್ಯಾಹತವಾದ ವಾಗ್ದಾಳಿಯಿಂದಾಗಿ ತಾಳ್ಮೆ ಕಳೆದುಕೊಂಡು ತೀವ್ರ ಪ್ರತ್ಯುತ್ತರವನ್ನೂ ನೀಡಿದರು.
ಪುರಸಭೆಯಲ್ಲಿ ಸದಸ್ಯ ಮಂಡಳಿ ಇದ್ದರೂ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಅತ್ಯಂತ ಬೇಜವಾಬ್ದಾರಿತನದ ಆಡಳಿತ ಕಂಡುಬರುತ್ತಿದೆ. ಸದಸ್ಯರಿಗೂ ಯಾವದೇ ಮಾಹಿತಿ ಇಲ್ಲದಂತಾಗಿದೆ. ಸಿಬ್ಬಂದಿಗಳೂ ತಮ್ಮ ಮನಕ್ಕೆ ಬಂದ ಸಮಯದಲ್ಲಿ ಕೆಲಸಕ್ಕೆ ಬರುತ್ತಾರೆ. ಪ್ರತಿಯೊಂದು ಕೆಲಸಕ್ಕೂ ಹಣವನ್ನು ಪಡೆಯಲಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಶಿವಪ್ಪ ಜಡಿ, ಸದಸ್ಯರನ್ನು ಅನಕ್ಷರಸ್ಥರು ಎಂದು ಹಿಯಾಳಿಸಲಾಗಿದೆ ಎಂದು ದೂರಿದರು.
ಈ ಹಂತದಲ್ಲಿ ತಮ್ಮ ಸಿಬ್ಬಂದಿಗಳ ಪರವಾಗಿ ಪ್ರತ್ಯುತ್ತರ ನೀಡಿದ ಮುಖ್ಯಾಧಿಕಾರಿಗಳು, ಕೇವಲ ನೌಕರರ ಮೇಲೆ ತಪ್ಪು ಹೊರಿಸಬೇಡಿ ಎಂದು ಸೂಚಿಸಿದರು. ಮುಖ್ಯಾಧಿಕಾರಿ ಹಾಗೂ ಸದಸ್ಯ ಶಿವಪ್ಪ ಜಡಿ ಅವರ ವಾಗ್ವಾದ- ಕಚ್ಚಾಟ ಒಂದು ಹಂತದಲ್ಲಿ ಅತಿರೇಕದ ಸ್ಥಿತಿ ತಲುಪಿತು. ಎಕಕಾಲಕ್ಕೆ ಎಲ್ಲರ ಕೂಗಾಟ ಚೀರಾಟಗಳಿಂದ ಸಭೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣಗೊಂಡಿತು. ಅಧ್ಯಕ್ಷ ಎ.ಎಮ್ ಫರಾಶ್ ಸೇರಿದಂತೆ ಹಲವು ಸದಸ್ಯರ ಶತಪ್ರಯತ್ನದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಬಳಿಕ ಸದಸ್ಯ ಶಿವಪ್ಪ ಜಡಿ ಸಭೆಯಿಂದಲೂ ಹೊರ ನಡೆದರು.
ಸವಣೂರ ಪುರಸಭೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದ ರೂಪದಲ್ಲಿ 5ಕೋಟಿ ರೂಗಳ ಅನುದಾನ ಲಭ್ಯವಾಗಿದೆ. ಆದರೆ ಈ ಅನುದಾನದ ಕಾಮಗಾರಿಗಳ ಬಗ್ಗೆ ಸದಸ್ಯರ ಗಮನಕ್ಕೆ ತರದೇ "ಹೊರಗಿನಿಂದ-ಹೊರಗೆ" ಅನುದಾನವನ್ನು ವೆಚ್ಚ ಮಾಡಲಾಗಿದೆ. ಕನಿಷ್ಠ ಪಕ್ಷ ಪುರಸಭೆಯ ಸಾಮಾನ್ಯ ಸಭೆಯಲ್ಲಿಯೂ ನಿರ್ಣಯ ಠರಾವು ಮಾಡದೆ ಅನುದಾನವನ್ನು ಸಂಬಂಧ ಸೂತ್ರ ಇಲ್ಲದ ಕಡೆಗಳಲ್ಲಿಯೂ ಬಳಸಲಾಗಿದೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಯಿತು.