ಗಡಿ ಭಾನಗಡಿ ಮಾಡಿದವರು ನಾವಲ್ಲ, ನಾವಲ್ಲ
ಅದೇ ರೀತಿ ಪುಟ 5 ರ ಕಂಡಿಕೆ 1.5, 1.6ರ ಪ್ರಕಾರ ಬಿ.ಐ.ಒ.ಎಂ. (ಮೋದಿ ಒಡೆತನದ), ವೈಎಂ&ಸನ್ಸ್ ಎಂಬ ಸಂಸ್ಥೆಗಳಿಗೆ ಸೇರಿದ ಗಣಿ ಪ್ರದೇಶದ ಸರಹದ್ದಿನ ಕಂಬಗಳು ಇಲ್ಲದೆ ಇರುವುದರಿಂದ ಸರ್ವೇ ನಡೆಸಲು ಸಾಧ್ಯವಾಗದು ಎಂದು ಸರ್ವೇ ಸಮಿತಿ ಹೇಳಿದ್ದು ನಿಜಕ್ಕೂ ಗಂಭೀರವಾದ ವಿಷಯ. ನಮ್ಮ ಸಂಸ್ಥೆ ಆಂಧ್ರ ಸರ್ಕಾರ ಮಂಜೂರು ಮಾಡಿದ ಪ್ರದೇಶಕ್ಕಿಂತ ಕಡಿಮೆ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿದೆ ಹೊರತು ಯಾವುದೇ ಕಾರಣಕ್ಕೂ ಅತಿಕ್ರಮಣ ಮತ್ತು ಆಕ್ರಮ ಆರೋಪ ನಿರಾಧಾರ.
ವರದಿಯ ಅನುಬಂಧ ಬಿ ಪ್ರಕಾರ ನಮ್ಮ ನೆರೆ ಗುತ್ತಿಗೆದಾರರಾದ ಮೋದಿ ಒಡೆತನದ ಬಿ.ಐ.ಒ.ಪಿ ಮತ್ತು ವೈ.ಎಂ.& ಸನ್ಸ್ ರವರು ನಮಗೆ ಮಂಜೂರಾದ ಪ್ರದೇಶವನ್ನು ಅತಿಕ್ರಮಣ ಮಾಡಿದ್ದು ಇದರಿಂದ ಸ್ಪಷ್ಟವಾಗುತ್ತದೆ. ನಿಜವಾಗಿಯೂ ಅತಿಕ್ರಮಣಕ್ಕೆ ಒಳಗಾಗಿದ್ದು ನಮ್ಮ ಸಂಸ್ಥೆ, ಬಲಿಯಾದವರು ನಾವು, ಸತ್ಯಾಂಶವನ್ನು ಮರೆಮಾಚಿ ಅತಿಕ್ರಮಣಕ್ಕೆ ಒಳಗಾದವರನ್ನೇ ಅತಿಕ್ರಮಣಕೋರರು ಎಂದು ಜನತೆಯಲ್ಲಿ ಭಾವನೆ ಬರುವಂತೆ ಬಿಂಬಿಸಿ ಸತತವಾಗಿ ನಮ್ಮ ಮೇಲೆ ಆರೋಪಗಳ ಸುರಿಮಳೆಯನ್ನು ಸುರಿಸುತ್ತ ಬಂದಿರುವ ಎಲ್ಲ ಮಹನೀಯರು ಈಗಲಾದರೂ ಅರ್ಥಮಾಡಿಕೊಳ್ಳಲಿ ಎಂದು ತಮ್ಮ ಮುಖಾಂತರ ಅತ್ಯಂತ ಕಳಕಳಿಯಿಂದ ವಿನಂತಿ ಮಾಡಿಕೊಳ್ಳುತ್ತೇವೆ.
ನನ್ನ ಹಿಂದಿನ ಅನೇಕ ಪತ್ರಿಕಾಗೋಷ್ಠಿಗಳಲ್ಲಿ ಈ ಸಂಗತಿಗಳನ್ನು ಸ್ಪಷ್ಟಪಡಿಸಿದ್ದೇನೆ. ನಮಗೆ ಗಣಿ ಪ್ರದೇಶ ಮಂಜೂರಾದ ಸಮಯ, ಮುಂದೆ ಗಣಿ ಪ್ರದೇಶ ನಮ್ಮ ಸಂಸ್ಥೆಗೆ ನೋಂದಣಿ ಸಂದರ್ಭದಲ್ಲಾಗಲಿ ನಾವು ಯಾರು ಮಂತ್ರಿಗಳಾಗಲಿ, ಶಾಸಕರಾಗಲಿ ಆಗಿರಲಿಲ್ಲ ಎಂಬುದು ಮತ್ತೊಮ್ಮೆ ತಿಳಿಯ ಬಯಸುತ್ತೇನೆ.
ಕುರುಡರಿಗೆ ದೃಷ್ಟಿ ಬರಲಿ, ಸತ್ಯಮೇವ ಜಯತೆ! »