ನಿತ್ಯಾನಂದ ಪರ ವಕೀಲರು ಬದಲು
ನಿತ್ಯಾನಂದನ ಜಾಮೀನು ಅರ್ಜಿ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಜಾಗೊಂಡಿರುವ ನಡುವೆ ನಿತ್ಯಾನಂದನಿಗೆ ಜಾಮೀನು ಸಿಗದಿರುವುದರಿಂದ ಕಾನೂನು ಬದ್ಧವಾಗಿ ನ್ಯಾಯಾಂಗ ಕಸ್ಟಡಿಯಲ್ಲಿರಲು ನ್ಯಾಯಾಧೀಶರ ಆದೇಶ ಪಡೆಯುವ ಅಗತ್ಯವಿತ್ತು. ಆದ್ದರಿಂದ ಸರ್ಕಾರಿ ಕಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಆರ್.ಲೋಕೇಶ್ರವರು ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಬಂಧನ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದರು.
ಕೃಷ್ಣ ಜನ್ಮಸ್ಥಳವಾಸ : ನಿತ್ಯಾನಂದ ಕಳೆದ 12 ದಿನಗಳಿಂದ ರಾಮನಗರ ಕಾರಾಗೃಹದ ಕಂಬಿಗಳ ಹಿಂದೆ ಬಂಧಿಯಾಗಿದ್ದು ಧ್ಯಾನ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದಾನೆ. ಜಾಮೀನು ಸಿಗಬಹುದೆಂಬ ಆಸೆಯಿಟ್ಟುಕೊಂಡಿದ್ದ ನಿತ್ಯಾನಂದನಿಗೆ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದಲ್ಲೂ ಕೂಡ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ನಿತ್ಯಾನಂದ ಸಾಕಷ್ಟು ನಿರಾಸೆಗೊಂಡಿದ್ದಾನೆ. ಈ ನಡುವೆ ಇಂದು ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆಗೊಂಡಿರುವುದರಿಂದ ನಿತ್ಯಾನಂದ ಮತ್ತಷ್ಟು ದಿನ ಶ್ರೀಕೃಷ್ಣ ಜನ್ಮಸ್ಥಳವಾಸಿಯಾಗಿ ಮುಂದುವರೆಯುವಂತಾಗಿದೆ.
ಪ್ರಧಾನ್ ಅಸೋಸಿಯೇಟ್ಸ್ ಹಾಜರು : ಜಾಮೀಜು ಅರ್ಜಿ ವಜಾಗೊಂಡಿರುವುದರಿಂದ ಪ್ರಕರಣದಿಂದ ಹಿಂದೆ ಸರಿದಿರುವ ಹಿರಿಯ ನ್ಯಾಯಾವಾದಿ ಚಂದ್ರಮೌಳಿಯವರ ಸ್ಥಾನಕ್ಕೆ ಮುಂಬೈನ ಖ್ಯಾತ ವಕೀಲ ನಿತಿನ್ ಪ್ರಧಾನ್ ಅಸೋಸಿಯೇಟ್ಸ್ರವರು ಬಂದಿದ್ದಾರೆ. ನಿತಿನ್ ಪ್ರಧಾನ್ರವರ ಸಹವಕೀಲರಾದ ಮುಂಬೈನ ವಿವೇಕಾನಂದಗುಪ್ತ ಮತ್ತು ವೇದವ್ಯಾಸ್ರವರು ರಾಮನಗರ ನ್ಯಾಯಾಲಯದಲ್ಲಿ ಹಾಜರಾಗಿ ನಿತ್ಯಾನಂದನ ಪರವಾದ ಮಂಡಿಸಿದರು.
ನ್ಯಾಯವಾದಿಗಳ ಸಾಲಿನಲ್ಲಿ ಸಾಕಷ್ಟು ಹೆಸರು ಮಾಡಿರುವಂತಹ ಮುಂಬೈನ ನಿತಿನ್ ಪ್ರಧಾನ್ರನ್ನ ನಿತ್ಯಾನಂದನ ಬೆಂಬಲಿಗರು ಕಾಮಪುರಾಣ ಪ್ರಕರಣದ ಬಗ್ಗೆ ವಾದ ಮಂಡಿಸಲು ಕರೆತಂದಿದ್ದಾರೆ. ನಿತಿನ್ ಪ್ರಧಾನ್ರವರು ಎಲ್ಲಾ ರಾಜ್ಯಗಳಲ್ಲಿ ತಮ್ಮ ಸಹವಕೀಲರನ್ನ ನೇಮಿಸಿಕೊಂಡಿರುವುದರಿಂದ ತಮಿಳುನಾಡು ಪಾಂಡಿಚೇರಿಗಳಲ್ಲು ನಿತ್ಯಾನಂದನ ಪ್ರಕರಣಗಳು ದಾಖಲಾಗಿರುವುದರಿಂದ ಎಲ್ಲಾ ರಾಜ್ಯಗಳಲ್ಲೂ ಪ್ರಕರಣದ ವಾದ ಮಂಡಿಸಲು ಸಹಕಾರಿಯಾಗುತ್ತದೆಂಬ ಉದ್ದೇಶಕ್ಕಾಗಿ ನಿತಿನ್ ಪ್ರಧಾನ್ರವರನ್ನ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ಕೋರ್ಟ್ಗೆ ಹಾಜರಾಗದ ನಿತ್ಯಾನಂದ : ಈ ನಡುವೆ ನಿತ್ಯಾನಂದ ಬಂಧನ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ನಿತ್ಯಾನಂದನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿತ್ತು. ಆದರೆ ಗ್ರಾಮಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆಯಿರುವುದರಿಂದ ನಿತ್ಯಾನಂದನ ಕೋರ್ಟ್ಗೆ ಕರೆತರಲು ಬಂದೋಬಸ್ತ್ ಸಾಧ್ಯವಿಲ್ಲವೆಂದು ಪೊಲೀಸ್ ಇಲಾಖೆ ಕಾರಣಕೊಟ್ಟಿದ್ದರಿಂದ ನಿತ್ಯಾನಂದನನ್ನ ನ್ಯಾಯಾಲಯದಲ್ಲಿ ಇಂದು ಹಾಜರುಪಡಿಸಲಿಲ್ಲ.