ಯುವಪತ್ರಕರ್ತರಿಗೆ ನೈತಿಕತೆ ಮುಖ್ಯ : ಸರದೇಸಾಯಿ
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂವ್ ಮೀಡಿಯಾ(ಐಐಜೆಎನ್ಎಂ) ಶನಿವಾರ ಏರ್ಪಡಿಸಿದ್ದ 2010ನೇ ಸಾಲಿನ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪತ್ರಿಕೋದ್ಯಮ ಇಂದು ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು. ನಾವಿಂದು ಶಾರ್ಟ್ ಕಟ್ ಪತ್ರಿಕೋದ್ಯಮದಲ್ಲಿ ಇದ್ದೇವೆ. ಯಾರು ಮೊದಲು ಸುದ್ದಿ ತರುತ್ತಾರೆ ಎಂಬುದು ಮುಖ್ಯವಾಗಿದೆಯೇ ಹೊರತು, ಯಾರು ಸರಿಯಾದ ಸುದ್ದಿ ತರುತ್ತಾರೆ ಎಂಬುದಲ್ಲ. ಈ ಧೋರಣೆ ಬದಲಾಗಬೇಕು. ವೃತ್ತಿಯನ್ನು ಸರಿ ದಾರಿಗೆ ತರಬೇಕಾದ ಗುರುತರ ಜವಾಬ್ದಾರಿ ಯುವಪತ್ರಕರ್ತರ ಮೇಲಿದೆ ಎಂದು ಸರದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ವಿಷಯ ನ್ಯಾಯಾಲಯದ ಮುಂದೆ ಇರುವಾಗ ಅದಕ್ಕೂ ಮೊದಲೇ ತೀರ್ಪು ನೀಡುವ ಕೆಲಸವನ್ನು ಮಾಧ್ಯಮಗಳು ಮಾಡಬಾರದು. ಜಾಹೀರಾತು ಆಧಾರಿತ ಸುದ್ದಿಗಳು ಸಹ ಮಾಧ್ಯಮ ಕ್ಷೇತ್ರ ಎದುರಿಸುತ್ತಿರುವ ದೊಡ್ಡ ಸವಾಲು ಎಂದು ಅವರು ಹೇಳಿದರು. ಐಐಜೆಎನ್ಎಂ ಡೀನ್ ಅಬ್ರಾಹಂ ಎಂ ಜಾರ್ಜ್ ಉಪಸ್ಥಿತರಿದ್ದರು. 76 ವಿದ್ಯಾರ್ಥಿಗಳು ಪದವಿ ಪಡೆದರು. 13 ವಿದ್ಯಾರ್ಥಿಗಳು ವಿವಿಧ ಪ್ರಶಸ್ತಿ ಪಡೆದರು.