ಕಸಬ್ ನನ್ನು ನೇಣಿಗೇರಿಸುವವರಾದರೂ ಯಾರು?
ಏಕೆಂದರೆ, ದೇಶದಲ್ಲಿ ಗಲ್ಲಿಗೇರಿಸುವವರು ಯಾರೂ ಇಲ್ಲ? ಪ್ರಸ್ತುತ ಪುಣೆಯ ಯರವಾಡಾ ಜೈಲಿನಲ್ಲಿ ಮಾತ್ರ ಗಲ್ಲು ಶಿಕ್ಷೆಗೊಳಗಾಗಿ ನ್ಯಾಯಾಲಯದಿಂದ ಅನುಮೋದನೆಗೊಳಗಾದ ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತಿದೆ. ಕಸಬ್ ನಿಗೆ ನೀಡಲಾಗಿರುವ ಗಲ್ಲು ಶಿಕ್ಷೆ ಎಲ್ಲ ಹಂತಗಳನ್ನು, ತೊಡಕುಗಳನ್ನು ದಾಟಿ ಗಲ್ಲು ಶಿಕ್ಷೆ ಖಾಯಂ ಆದರೆ ಇದೇ ಯರವಾಡಾ ಜೈಲಿನಲ್ಲಿ ಗಲ್ಲು ವಿಧಿಸಬೇಕಾಗುತ್ತದೆ.
ಆದರೆ ಅಸಲಿಯತ್ತೇನೆಂದರೆ ಯರವಾಡಾ ಜೈಲಿನಲ್ಲಿ ನೇಣಿನ ಕುಣಿಕೆಯನ್ನು ಅತ್ಯಂತ ನಿಖರತೆಯಿಂದ, ಯಾವುದೇ ಭಾವನೆಯಿಲ್ಲದ, ಮಾನಸಿಕವಾಗಿ ಸ್ಥಿರತೆಯುಳ್ಳ ಮತ್ತು ಗಟ್ಟಿ ಗುಂಡಿಗೆಯುಳ್ಳ ವ್ಯಕ್ತಿಯೇ ಇಲ್ಲ. ಇದ್ದ ಕೊಟ್ಟ ಕೊನೆಯ ವ್ಯಕ್ತಿ 1995ರಲ್ಲಿ ನಿವೃತ್ತರಾಗಿದ್ದಾರೆ. ಬೇರೆ ಜೈಲುಗಳಲ್ಲಿ ನೇಣು ಹಾಕುವ ಕೆಲಸ ಮಾಡುತ್ತಿದ್ದ ಕೆಲವರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ನಿವೃತ್ತರಾಗಿದ್ದಾರೆ. ಇಂಥ ಕಾರ್ಯ ಮಾಡಲು ದೇಶದಲ್ಲಿ ಯಾರೂ ಮುಂದು ಬರುತ್ತಿಲ್ಲ.
ಇದೇ ಜೈಲಿನಲ್ಲಿ ರಾಷ್ಟ್ರಪತಿಯಿಂದ ಕ್ಷಮಾದಾನ ತಿರಸ್ಕೃತರಾದ ಹನ್ನೊಂದು ಅಪರಾಧಿಗಳು ಕುಣಿಕೆಗೆ ಕುತ್ತಿಗೆಯೊಡ್ಡಿ ನಿಂತಿದ್ದಾರೆ. ಕಸಬ್ ಹನ್ನಡನೆಯವನು. ಆ ಹನ್ನೊಂದು ಜನರಿಗೇ ಗಲ್ಲು ಶಿಕ್ಷೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಇನ್ನು ಕಸಬ್ ಗೆ ಯಾವಾಗಲೋ?
ಪಶ್ಚಿಮ ಬಂಗಾಳದಲ್ಲಿ 2004ರಲ್ಲಿ ಮಗುವನ್ನು ಬಲಾತ್ಕರಿಸಿ ಹತ್ಯೆಗೈದಿದ್ದ ಧನಂಜೊಯ್ ಚಟರ್ಜಿ ಎಂಬುವವನನ್ನು ಗಲ್ಲಿಗೇರಿಸಿದ್ದೇ ಕೊನೆ. ಆತನನ್ನು ಗಲ್ಲಿಗೇರಿಸಿದ್ದ 87 ವರ್ಷದ ನಾತಾ ಮುಲಿಕ್ ಎಂಬುವವರು ಈಗಿಲ್ಲ. ಅವರ ತಂದೆ ಕೂಡ ಬ್ರಿಟಿಷರ ಕಾಲದಲ್ಲಿ ನೇಣಿಗೇರಿಸುವ ಕೆಲಸ ಮಾಡುತ್ತಿದ್ದರೆ. 2009ರಲ್ಲಿ ಕೊನೆಯುಸಿರೆಳೆದ ಮುಲಿಕ್ ತನ್ನ ಮೊಮ್ಮಗನಿಗೆ ಕೊಲ್ಕತಾದ ಅಲಿಪೂರ್ ಜೈಲಿನಲ್ಲಿ ಕೆಲಸ ಕೊಡಿಸಿದ್ದಾರಾದರೂ ಅವರು ನೇಣು ಹಾಕುವ ಕೆಲಸಕ್ಕೆ ಒಪ್ಪುತ್ತಿಲ್ಲ.
ಗಲ್ಲಿಗೇರಿಸುವವರಿಗಾಗಿ ಅರ್ಜಿ ಕರೆಯಲಾಗಿದೆ ಆದರೆ ಯಾರೂ ಮುಂದುಬರುತ್ತಿಲ್ಲ. ಗಲ್ಲಿಗೇರಿಸುವಾಗ ಬೇರೆ ವಿಚಾರ ಮಾಡದ, ಮನಸು ಸ್ಥಿರವಿರುವ, ಗಟ್ಟಿ ಗುಂಡಿಗೆಯುಳ್ಳ ಯಾರಾದರೂ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಯಾರಾದರೂ ಮುಂದೆ ಬರದಿದ್ದಲ್ಲಿ ಜೈಲು ಸೂಪರಿಂಟೆಂಟ್ ಅವರಿಗೆ ತಾವೇ ಸ್ವತಃ ನೇಣು ಹಾಕುವ ಅಧಿಕಾರವಿದೆ. ಆದರೆ, ಯಾವ ಸೂಪರಿಟೆಂಟ್ ಕೂಡ ಇಂಥ ಕೆಲಸಕ್ಕೆ ಕೈಹಾಕದಿರುವುದು ವಿಪರ್ಯಾಸದ ಸಂಗತಿ.