ಗಣಿಗಾರಿಕೆ ವಿರುದ್ದ ಕರವೇ ಹೋರಾಡಲಿ : ಅನಂತಮೂರ್ತಿ
ಕರ್ನಾಟಕ ರಕ್ಷಣಾ ವೇದಿಕೆ ಕರವೇ ನಲ್ನುಡಿ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಗಣಿಗಾರಿಕೆಯು ಕನ್ನಡ ಸಂಸ್ಕೃತಿಯನ್ನು, ನಾಡಿನ ಸಂಪತ್ತನ್ನು ನಾಶ ಮಾಡುತ್ತಿದೆ. ಕನ್ನಡ ಹಾಗೂ ಗಣಿ ಎರಡೂ ಮುಂದಿನ ತಲೆಮಾರಿಗೆ ಉಳಿಯುವಂತಹ ಹೋರಾಟಕ್ಕೆ ಕನ್ನಡ ಸಂಘಟನೆಗಳು ಸಿದ್ಧವಾಗಬೇಕಾಗಿದೆ ಎಂದರು.
ಗಣಿ ಲೂಟಿ ಮಾಡುತ್ತಿರುವವರು ಪ್ರಜಾಪ್ರಭುತ್ವವನ್ನೇ ಅರ್ಥಹೀನ ಮಾಡುತ್ತಿದ್ದಾರೆ. ಪ್ರಜಾತಂತ್ರ ಎಲ್ಲಿದೆ ಎಂಬುದನ್ನು ಸ್ಕ್ಯಾನರ್ ಮೂಲಕ ಹುಡುಕಬೇಕಾಗಿದೆ. ಉತ್ತರ ಭಾರತದಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸುತ್ತಿರುವುದರ ವಿರುದ್ದ ಹೋರಾಟ ಕಟ್ಟುತ್ತಿರುವ ನಕ್ಸಲರು ವಿಜೃಂಭಿಸುತ್ತಿದ್ದಾರೆ ಎಂದು ಅನಂತಮೂರ್ತಿ ಹೇಳಿದರು.
ಬಂಡವಾಳ ಹೂಡಲು ಬರುವ ಬಹುರಾಷ್ಟ್ರೀಯ ಕಂಪನಿಗಳು ಕನ್ನಡವನ್ನು ಒಂದು ಭಾಷೆಯನ್ನಾಗಿ ಬಳಸಬೇಕು. ಕನ್ನಡಿಗರಿಗೆ ಉದ್ಯೋಗ ಮೀಸಲಿಡಬೇಕು ಎಂಬ ಷರತ್ತು ವಿಧಿಸುವಂತೆ ರಕ್ಷಣಾ ವೇದಿಕೆ ಸರಕಾರದ ಮೇಲೆ ಒತ್ತಡ ಹೇರಬೇಕು. ಕನ್ನಡಿಗರು ಎಲ್ಲಾ ಕೆಲಸವನ್ನೂ ಮಾಡಬಲ್ಲಂಥ ತರಬೇತಿಯನ್ನು ನೀಡುವಂತ ಚಳವಳಿಯನ್ನು ರಕ್ಷಣಾ ವೇದಿಕೆ ಆರಂಭಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.