ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಕಳೆದಬಾರಿಗಿಂತ ಈ ಬಾರಿ ಫಲಿತಾಂಶದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಒಟ್ಟಾರೆ ಶೇ. 49.9ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿಯರು ಕೂಡ ಈ ಬಾರಿ ವಿದ್ಯಾರ್ಥಿಗಳನ್ನು ಹಿಂದೆ ಹಾಕಿದ್ದು, ಕ್ರಮವಾಗಿ ವಿದ್ಯಾರ್ಥಿನಿಯರು ಶೇ.67.1 ಮತ್ತು ವಿದ್ಯಾರ್ಥಿಗಳು ಶೇ.56.60ರಷ್ಟು ಪಾಸಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ವಿದ್ಯಾರ್ಥಿಗಳನ್ನು ಹಿಂದೆ ಹಾಕಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಶೇ.89.43ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪಡೆದಿದ್ದು, ಜಿಲ್ಲೆಯಲ್ಲಿ ಶೇ.88.93ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕೊನೆಯ ಸ್ಥಾನದಲ್ಲಿ ಹೊಸದಾಗಿ ನಿರ್ಮಿತವಾಗಿರುವ ಯಾದಗಿರಿ ಜಿಲ್ಲೆ ಇದ್ದು, ಶೇ.33.42ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಮೊದಲ ಬಾರಿ ಪರೀಕ್ಷೆ ತೆಗೆದುಕೊಂಡವರಲ್ಲಿ ಶೇ.61.94 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಕೇವಲ ಶೇ.50.88ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಲು ಸಫಲರಾಗಿದ್ದರು. ಈ ಬಾರಿ ಒಟ್ಟು 6 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಕುಳಿತಿದ್ದರು.
42 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಜೂನ್ 28ರಂದು ಪೂರಕ ಪರೀಕ್ಷೆ ನಡೆಯಲಿದೆ. ಈ ಬಾರಿ ಪೂರಕ ಪರೀಕ್ಷೆ ತೆಗೆದುಕೊಂಡವರ ಸಂಖ್ಯೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿತ್ತೆಂದು ಅವರು ತಿಳಿಸಿದರು.
ಈ ವರ್ಷ ಮಾರ್ಚ್ 18ರಿಂದ 31ರವರೆಗೆ ರಾಜ್ಯದ 907 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆ ನಂತರ 39 ಕೇಂದ್ರಗಳಲ್ಲಿ ಮೌಲ್ಯಮಾಪನ ಏಪ್ರಿಲ್ 4ರಿಂದ 29ರವರೆಗೆ ನಡೆದಿತ್ತು. ಅಂದುಕೊಂಡದ್ದಕ್ಕಿಂತ ಉತ್ತಮ ಮತ್ತು ಮೊದಲೇ ಫಲಿತಾಂಶ ಬಂದಿದ್ದಕ್ಕೆ ಶಿಕ್ಷಕರನ್ನು ಮತ್ತು ಮೌಲ್ಯಮಾಪಕರನ್ನು ಕಾಗೇರಿ ಶ್ಲಾಘಿಸಿದರು. ಕಾಲೇಜುಗಳಿಗೆ ನೀಡಿದ ಉತ್ತಮ ಮೂಲಭೂತ ಸೌಕರ್ಯ ಒದಗಿಸಿರುವುದೂ ಫಲಿತಾಂಶ ಉತ್ತಮವಾಗಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಪಿಯುಸಿ ಮಕ್ಕಳ ಜೀವನದಲ್ಲಿ ಪ್ರಮುಖ ಘಟ್ಟ. ಮಕ್ಕಳು ಮತ್ತು ಪೋಷಕರು ಬಹಳ ಕಾತರದಿಂದ ಕಾಯ್ತಿರುವಂಥ ಕ್ಷಣ. ಇಂಥ ಸಂದರ್ಭದಲ್ಲಿ ತೇರ್ಗಡೆಯಾಗದ ಮಕ್ಕಳ ಮೇಲೆ ಪಾಲಕರು ವಿಶ್ವಾಸ ತುಂಬಬೇಕು. ಅನಗತ್ಯ ಒತ್ತಡ ಹೇರಬಾರದು. ಫಲಿತಾಂಶ ಮುಂದಿನ ವೃತ್ತಿ ಜೀವನಕ್ಕೆ ಅಳತೆಗೋಲಾದರೂ ಸರ್ವಸ್ವವಲ್ಲ. ಅವರಲ್ಲಿನ ಆಸಕ್ತಿ ಗುರುತಿಸಿ ಅವರನ್ನು ಪ್ರೋತ್ಸಾಹಿಸಿದರೆ ಮುಂದೆ ಬರಲು ಸಾಧ್ಯವಿದೆ ಎಂದು ಅವರು ವಿದ್ಯಾರ್ಥಿ ಮತ್ತು ಪಾಲಕರನ್ನು ಉದ್ದೇಶಿಸಿ ಮಾತನಾಡಿದರು.
ಪಿಯುಸಿ ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್ಕಿಸಿ