ಮಡಿಕೇರಿಯಲ್ಲೂ ಲೈಂಗಿಕ ದೌರ್ಜನ್ಯ
ಹಾನಗಲ್ ನಲ್ಲಿ ಪಿಎಸ್ಐನೊಬ್ಬ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ರಾಯಚೂರಿನಲ್ಲಿ ಕಾಂಗ್ರೆಸ್ ನಾಯಕನ ಮಗ ಇಬ್ಬರು ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರಿನಲ್ಲಿ ಒಂದು ಪ್ರಕರಣ ಮುಚ್ಚಿ ಹೋಗಿದೆ, ಇನ್ನೊಂದು ಇಂದು ಬೆಳಕು ಕಂಡಿದೆ. ಅತ್ಯಾಚಾರವೆಸಗಿದ ದೇವರೆಡ್ಡಿ ಪರಾರಿಯಾಗಿದ್ದಾನೆ. ಈಗ ಮಡಿಕೇರಿಯಲ್ಲಿಯೂ ಇಂಥದೇ ಪ್ರಕರಣ ದಾಖಲಾಗಿದೆ.
ಎಸ್ ಟಿ ಡಿ ಬೂತ್ ನಡೆಸುತ್ತಿದ್ದ ಪೂಣಚ್ಚ ಎಂಬಾತನ ಹೆಂಡತಿ ಶುಭಾ ಪೊಲೀಸ್ ಕಾನ್ಸ್ ಟೇಬಲ್ ರಾಜೇಂದ್ರ ತನ್ನನ್ನು ಲೈಂಗಿಕವಾಗಿ ಹಿಂಸಿಸಿದ್ದಾನೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ಮಂಜುನಾಥ್ ಅಣ್ಣಿಗೇರಿಗೆ ದೂರು ನೀಡಿದ್ದಾಳೆ.
ಶುಭಾಳನ್ನು ತಂಗಿಯೆಂದಲೇ ಸಂಭೋಧಿಸುತ್ತಿದ್ದ ರಾಜೇಂದ್ರ ಆಕೆಯ ಗಂಡ ಮನೆಯಲ್ಲಿಲ್ಲದಾಗ ಮನೆಗೆ ಬಂದು ಆಕೆಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ. ಮತ್ತೊಮ್ಮೆ ಬಾಗಿಲು ಹಾಕಿದರೂ ಕಲ್ಲಿನಿಂದ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದ. ಒಮ್ಮೆ ಟೆಲಿಫೋನ್ ಬೂತನ್ನು ಸರ್ವನಾಶ ಮಾಡಿದ್ದ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಏನೂ ಕ್ರಮ ಜರುಗಿಸಲಿಲ್ಲ. ನಂತರ ರಾಜೇಂದ್ರ ಕೊಲೆ ಬೆದರಿಕೆ ಹಾಕಲು ಪ್ರಾರಂಭಿಸಿದ.
ಬೇಸತ್ತ ಶುಭಾ ಮಾನವ ಹಕ್ಕು ಸಂಸ್ಥೆಗೆ ಮೊರೆಹೋಗಿದ್ದಾರೆ. ಸಂಸ್ಥೆಯ ವಸಂತ್ ಎಂಬುವವರು ಪೊಲೀಸ್ ವರಿಷ್ಠರನ್ನು ಭೇಟಿಯಾದ ನಂತರ ಕುಶಾಲನಗರ ಪೊಲೀಸರು ದೂರು ದಾಖಲಿಸಿಕೊಂಡು ಆತನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ ಆತ ತಲೆಮರೆಸಿಕೊಂಡಿದ್ದಾರೆ. ರಾಜೇಂದ್ರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದಾಳಿ, ಲೂಟಿ, ಲೈಂಗಿಕವಾಗಿ ಹಿಂಸಿಸಿದ ಮತ್ತು ಕೊಲೆ ಬೆದರಿಕೆ ಹಾಕಿದ ಆರೋಪ ಹೊರಿಸಲಾಗಿದೆ. ಹಿಂದೆ ಕುಡಿದು ಕರ್ತವ್ಯಲೋಪ ಎಸಗಿದ ಕಾರಣ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.