ವರ್ಷವಿಡಿ ಪ್ರತಿನಿತ್ಯ ಧನ್ವಂತರಿ ಹೋಮ
ಸವಣೂರಿನ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಅಧಿಕ ಮಾಸದ ಪರ್ಯಂತ ಶ್ರೀಮದ್ ಭಾಗವತ ಪ್ರವಚನವನ್ನು ಕೈಗೊಂಡಿರುವ ಶ್ರೀಗಳು, ನಿಷ್ಕಲ್ಮಶವಾದ ಭಕ್ತಿಯೊಂದೇ ಭಗವಂತನನ್ನು ಒಲಿಸುವ ಸಾಧನವಾಗಿದೆ ಎಂದರು. ಧರ್ಮದ ಬಗ್ಗೆ, ಭಗವಂತನ ಬಗ್ಗೆ, ಗೋವುಗಳ ಬಗ್ಗೆ ದ್ವೇಷ ಸಾಧನೆ ಅನರ್ಥಕಾರಕ ಎಂದು ತಿಳಿಸಿದರು.
ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಮಠದಲ್ಲಿ ಅಧಿಕ ಮಾಸದ ಪರ್ಯಂತ ವಾಸ್ತವ್ಯವನ್ನು ಮಾಡಿರುವ ಶ್ರೀಗಳು, ಪ್ರತಿನಿತ್ಯ ವೈಕುಂಠ ಮೂಲ ರಾಮದೇವರ ಮಹಾಪೂಜೆ, ವೇದಾಂತ ಗ್ರಂಥಗಳ ಪಾಠ ಹಾಗೂ ಶ್ರೀಮದ್ ಭಾಗವತ ಪ್ರವಚನದೊಂದಿಗೆ ಜ್ಞಾನ ಗಂಗೆಯನ್ನು ಹರಿಸುತ್ತಿದ್ದು, ಶ್ರೀಮಠದಲ್ಲಿ ಅಧಿಕ ಮಾಸದ ಪ್ರಯಕ್ತ ಪ್ರತಿನಿತ್ಯ ಹಲವಾರು ವಿಶೇಷವಾದ ಧರ್ಮ ಕಾರ್ಯಕ್ರಮಗಳು ಶ್ರೀಗಳ ಸಮ್ಮುಖದಲ್ಲಿ ನೆರವೇರುತ್ತಿದೆ.
ವಿಕೃತಿ ನಾಮ ಸಂವತ್ಸರದ ಪರ್ಯಂತ ಪ್ರತಿನಿತ್ಯ ಧನ್ವಂತರಿ ಹೋಮವನ್ನು ಕೈಗೊಳ್ಳಲಾಗುತ್ತಿದ್ದು, ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ, ದಾನ ಸೇರಿದಂತೆ ಹಲವಾರು ಧರ್ಮಕಾರ್ಯ, ಜ್ಞಾನ ಕಾರ್ಯ ನೆರವೇರುತ್ತಿದೆ. ಮೇ.12 ರಂದು ಭಾಗವತ ಪ್ರವಚನದ ಮಹಾಮಂಗಳ ನೆರವೇರಲಿದ್ದು, ಶ್ರೀಗಳಿಗೆ ತುಲಾಭಾರ, ಗೌರವ ಸಮರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಲಿದೆ ಎಂದು ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಗುರುರಾಜಾಚಾರ್ಯ ರಾಯಚೂರ ತಿಳಿಸಿದರು.