ಹೊಗೇನಕಲ್ ಧೂಳು : ಖರ್ಗೆ ಮುಂದೆ ಕರವೇ
ತಮಿಳುನಾಡು ಸರಕಾರ ಅಕ್ರಮವಾಗಿ ರಾಜ್ಯ ಜಾಗದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಆರಂಭಿಸಿದೆ. ಈ ಪ್ರದೇಶ ಮೂರನೇ ಒಂದು ಭಾಗ ಕರ್ನಾಟಕಕದ್ದು. ಒಂದು ಭಾಗ ಮಾತ್ರ ತಮಿಳುನಾಡಿಗೆ ಸೇರಿದ್ದು. ಹೀಗಾಗಿ, ಕರುಣಾನಿಧಿ ಸರಕಾರ ರಾಜ್ಯಕ್ಕೆ ಸೇರಿದ ಭೂಮಿಯನ್ನು ರಾಜಾರೋಷವಾಗಿ ಕಬಳಿಕೆ ಮಾಡಿಕೊಂಡು ಯೋಜನೆಯ ಕಾಮಗಾರಿಯನ್ನು ಆರಂಭಿಸಿದೆ. ರಾಜ್ಯಕ್ಕೆ ಅನ್ಯಾಯವಾದರೂ ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರು ಮಾತುನಾಡುತ್ತಿಲ್ಲವೇಕೆ ಎಂದು ಕರವೇ ಅಧ್ಯಕ್ಷ ಟಿ ವಿ ನಾರಾಯಣಗೌಡ ಪ್ರಶ್ನಿಸಿದರು.
ಸಂಸತ್ ಅಧಿವೇಶನ ನಡೆಯುತ್ತಿದ್ದರೂ ಕೇಂದ್ರದ ಮಂತ್ರಿಗಳಾದ ಮಲ್ಲಿಕಾರ್ಜುನ ಖರ್ಗೆ, ಎಸ್ ಎಂ ಕೃಷ್ಣ, ಕೆ ಎಚ್ ಮುನಿಯಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಏನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ನಮ್ಮ ಸಂಸದರು ರಾಜ್ಯದ ಹಿತಾಸಕ್ತಿಯನ್ನು ಮರೆತಿದ್ದಾರೆ ಎಂದು ಕಿಡಿಕಾರಿದರು. ಯೋಜನೆ ವಿರೋಧಿಸಿ ಮೇ 6 ರಂದು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ನಾರಾಯಣಗೌಡ ಹೇಳಿದರು. ಖರ್ಗೆ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.