ಕಂಪ್ಲಿ ಕಾಳಮ್ಮನಿಗೆ ಮತ್ಸ್ಯಕುಲದ ವಿಶಿಷ್ಟ ಹರಕೆ
ಬಳ್ಳಾರಿ, ಏ.28:ಕಂಪ್ಲಿಯ ತುಂಗಭದ್ರಾ ಮೀನುಗಾರರ ಕಾಲೋನಿಯಲ್ಲಿ ಮೀನುಗಾರರು ತಮ್ಮ ಆರಾಧ್ಯ ದೈವವಾಗಿರುವ ಕಾಳಮ್ಮ ದೇವಿಯ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಎರಡು ದಿನ ಭಕ್ತರು ಉತ್ಸಾಹದಿಂದ ಪಾಲ್ಗೊಂಡು ದೇವಿಯ ಆಶೀರ್ವಾದ ಬೇಡಿದರು.
ದಿನಾಂಕ 26ರ ಸೋಮವಾರ ಧ್ವಜಾರೋಹಣ. ಸಂಜೆ 4.30ಕ್ಕೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಕಾಳಮ್ಮ ದೇವಿಯ ಪೂಜಾ ಮಹೋತ್ಸವದ ಪ್ರಮುಖ ಘಟ್ಟವಾದ ಮಂಗಳವಾರದಂದು ತುಂಗಭದ್ರಾ ನದಿ ತೀರದಿಂದ ಮುತ್ತೈದೆಯರು ಪೂರ್ಣ ಕುಂಭದೊಂದಿಗೆ ಬೃಹತ್ ಮೆರವಣಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾಳಮ್ಮ ದೇವಿ ಉತ್ಸವದಲ್ಲಿ ಭಕ್ತಾದಿಗಳು ತಮ್ಮ ಹರಕೆಯ ಅನುಸಾರ ವಿವಿಧ ರೀತಿಯ ಅಸ್ತ್ರಗಳನ್ನು ಹಾಕಿಕೊಂಡು ಹರಕೆ ತೀರಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಇಬ್ಬರು ಭಕ್ತಾಧಿಗಳು ರುಬ್ಬುಗುಂಡು ಅಸ್ತ್ರ (ಅಲಗು), ಇಬ್ಬರು ಭಕ್ತಾಧಿಗಳು ಆಟೋರಿಕ್ಷಾ ಅಸ್ತ್ರ(ಅಲಗು), ಒಬ್ಬ ಭಕ್ತರು ತೇರಿನ ಅಸ್ತ್ರ (ಅಲಗು) ಮತ್ತು ಮತ್ತೊಬ್ಬ ಭಕ್ತರು ಮಾರುತಿನ ಕಾರಿನ ಅಸ್ತ್ರ (ಅಲಗು) ಎಳೆಯುವ ಹರಕೆಹೊತ್ತು ತಮ್ಮ ಹರಕೆಯಾನುಸಾರ 7 ಅಡಿ ಉದ್ದದ ತ್ರಿಶೂಲವನ್ನು ಬಾಯಿಗೆ ಸಿಕ್ಕಿಸಿಕೊಂಡು ತಮ್ಮ ಬೆನ್ನುಗೆ ಕಬ್ಬಿಣದ ಎರಡು ಎಸ್ ಆಕಾರದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ಅದಕ್ಕೆ ಆಟೋ ರಿಕ್ಷಾ, ರುಬ್ಬುವ ಗುಂಡು ಮತ್ತು ಮಾರುತಿ ಕಾರನ್ನು ಕಟ್ಟಿಕೊಂಡು ಸುಮಾರು ಒಂದು ಕಿಮೀ. ದೂರದ ಸುಂಕಲಮ್ಮ ದೇವಿ ದೇವಸ್ಥಾನದವರೆಗೆ ಅವುಗಳನ್ನು ಎಳೆಯುವ ಮೂಲಕ ತಮ್ಮ ಭಕ್ತಿಯ ಹರಕೆಯನ್ನು ತೀರಿಸಿದರು.
ಭಕ್ತರು ಆಟೋ, ರುಬ್ಬುಗುಂಡು ಮತ್ತು ಕಾರನ್ನು ಎಳೆಯುವಾಗ ತಮ್ಮ ಸಂಪ್ರದಾಯದಂತೆ ತಮಿಳುನಾಡಿನಿಂದ ಆಗಮಿಸಿದ ಡೋಲು ಬಾರಿಸುವವರು ಉತ್ಸವಕ್ಕೆ ಮೆರಗು ನೀಡುವ ರಾಗಗಳನ್ನು ನುಡಿಸುವ ಮೂಲಕ ಭಕ್ತರಲ್ಲಿ ದೈವೀ ಭಾವನೆಗಳನ್ನು ಮೂಡಿಸಿದರು. ಕೆಲವು ಮಹಿಳೆಯರು 7 ಅಡಿಗಳ ಉದ್ದದ ತ್ರಿಸೂಲವನ್ನು ಬಾಯಿಗೆ ಸಿಕ್ಕಿಸಿಕೊಂಡು ದೇವೀ ಆರಾಧನೆ ಮಾಡುತ್ತಿದ್ದರು.
ಮಂಗಳವಾರ ಬೆಳಗ್ಗೆ ಆರಂಭವಾದ ಈ ವಿಶಿಷ್ಟ ಉತ್ಸವವು ಮಧ್ಯಾಹ್ನ 1 ಗಂಟೆಗೆ ಸುಂಕಲಮ್ಮ ದೇವಿಯ ದೇವಸ್ಥಾನ ತಲುಪಿ ಅಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಮುಕ್ತಾಯಗೊಂಡಿತು. ನಂತರ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಕಂಪ್ಲಿ ಕೋಟೆಯಲ್ಲಿ ನಡೆದ ಮೀನುಗಾರರ ಈ ಉತ್ಸವವನ್ನು ವೀಕ್ಷಿಸಲು ಕಂಪ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಸೇರಿದ್ದರು.