ಬಂದ್ ಬಿಸಿಗೆ ಬಸವಳಿದ ಬಳ್ಳಾರಿ ಬಂಧುಗಳು
ಬಳ್ಳಾರಿ, ಏ. 28 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ವಿರೋಧಿಸಿ ಅಖಿಲ ಭಾರತ ಬಂದ್ ಅಂಗವಾಗಿ ಮಂಗಳವಾರ ಜಿಲ್ಲೆಯಾದ್ಯಂತ ಬಂದ್ ಮಿಶ್ರ ಪ್ರತಿಕ್ರಿಯೆ ಪಡೆದಿದೆ.
ಬಂದ್ ಅಂಗವಾಗಿ ಶಾಲಾ-ಕಾಲೇಜ್ಗಳು ಬಂದ್ ಆಗಿದ್ದವು. ನಗರದ ಮುಖ್ಯ ರಸ್ತೆಗಳಲ್ಲಿ ಮಧ್ಯಾಹ್ನದವರೆಗೆ ಬಿಕೋ ಅನ್ನುತ್ತಿದ್ದವು. ಬಳ್ಳಾರಿ ಜಿಲ್ಲೆಯ ಬಿಸಿಲ ತಾಪದಲ್ಲಿ ಬಸವಳಿದ ಜನರು ಬಂದ್ನಿಂದ ಮತ್ತಷ್ಟು ತತ್ತರಿಸಿದರು. ಅಲ್ಲದೇ, ಮಧ್ಯಾಹ್ನದ ನಂತರ ಜಿಲ್ಲೆಯಾದ್ಯಂತ ಜನಜೀವನ ಯಥಾಸ್ಥಿತಿ ತಲುಪಿತ್ತು. ರಸ್ತೆಗಳಲ್ಲಿ ಜನಸಂಚಾರ, ಬಸ್ - ಆಟೋಗಳ ಸಾರಿಗೆ ಸಾಮಾನ್ಯವಾಗಿತ್ತು. ಸಂಜೆಯಿಂದ ಸಿನಿಮಾ ಮಂದಿರಗಳು ಪ್ರದರ್ಶನ ನಡೆಸಿದವು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಓಡಾಟವನನ್ನು ಮಧ್ಯಾಹ್ನದವರೆಗೆ ನಿಲುಗಡೆ ನಡೆಸಿತ್ತು. ಈ ಮುಷ್ಕರದಿಂದ ಬೇರೆ ಊರುಗಳಿಂದ ಆಗಮಿಸಿದ್ದ ಬಸ್ಗಳು ಊರ ಹೊರಗಡೆ ನಿಲುಗಡೆ ಆಗಿದ್ದರಿಂದ ಪ್ರಯಾಣಿಕರು ಕಾಲ್ನಡಿಗೆ ತೆರಳಬೇಕಾಯಿತು. ಬಸ್ ನಿಲ್ದಾಣದಲ್ಲಿ ಆಗಮಿಸಿದ್ದ ಬಸ್ಗಳು ಅಲ್ಲಿಯೆ ನಿಲುಗಡೆ ಹೊಂದಿದ್ದರಿಂದ ಪ್ರಯಾಣಿಕರು ಪರಿತಪಿಸುವಂತಾಯಿತು. ಸಿನಿಮಾ ಮಂದಿರಗಳು ಬೆಳಿಗ್ಗೆ ಹಾಗೂ ಮಧ್ಯಾಹ್ನದ ಪ್ರದರ್ಶನಗಳನ್ನು ರದ್ದುಗೊಳಿಸಿದ್ದವು.
ಎಲ್ಲಾ ರಾಷ್ಟ್ರೀಕತ ಬ್ಯಾಂಕ್ಗಳು ತಮ್ಮ ವಹಿವಾಟು ನಡೆಸಲಿಲ್ಲ. ಪ್ರತಿಭಟನೆಕಾರರು ಕೆಲವು ಬ್ಯಾಂಕಿಗೆ ತೆರಳಿ ಪ್ರತಿಭಟನೆಯ ಬಗ್ಗೆ ಮನವೋಲಿಸಿದ್ದರಿಂದ ಎಲ್ಲಾ ಬ್ಯಾಂಕ್ ತಮ್ಮ ವಹಿವಾಟು ನಿಲ್ಲಿಸಬೇಕಾಯಿತು. ದೂರ ಸಂಪರ್ಕ ಇಲಾಖೆಯ ಕಚೇರಿಗೆ ಪ್ರತಿಭಟನೆಕಾರರು ತೆರಳಿ ಅದನ್ನು ಬಂದ್ಗೊಳಿಸುವಲ್ಲಿ ಯಶಸ್ವಿಯಾದರು. ನಗರಸಭೆ ಕಚೇರಿಯಲ್ಲಿ ಕೆಲವು ನೌಕರರು ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿರುವುದನ್ನು ಗಮನಿಸಿ, ಅಲ್ಲಿಗೆ ತೆರಳಿ ಒಳಗಿದ್ದ ನೌಕರರನನ್ನು ಹೊರಗೆ ಕಳಿಸಿ, ಬೀಗ ಹಾಕಿಸಿದರು.