ಶಿವಮೊಗ್ಗದಲ್ಲಿ ಭಾನುವಾರ ಸಿಎಂಗೆ ಭರ್ತಿ ಕೆಲಸ
ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರವೇ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಹಣ ನೀಡಿದ್ದು, ಸುಮಾರು 9.6 ಕೋಟಿ ರು.ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಗೊಂಡಿದೆ. ಈ ನೂತನ ಬಸ್ ನಿಲ್ದಾಣದಲ್ಲಿ ಒಟ್ಟು 40 ಬಸ್ಸುಗಳನ್ನು ನಿಲ್ಲಿಸಬಹುದಾಗಿದ್ದು, ನಿಲ್ದಾಣದಲ್ಲಿ ಹೊಟೇಲ್ ಹಾಗೂ ಅಂಗಡಿಗಳಿಗೆ ವಿಶಾಲ ಸ್ಥಳವನ್ನು ಮೀಸಲಿಡಲಾಗಿದೆ. ಹಾಗೆಯೇ ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ.
ಸುಮಾರು 8 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ನೆಹರೂ ಕ್ರೀಡಾಂಗಣದ ಹಿಂಭಾಗದಲ್ಲಿ ನಿರ್ಮಾಣವಾಗಿರುವ ವಿಶಾಲ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೊಳ್ಳಲಿದೆ. ಈ ಒಳಾಂಗಣ ಕ್ರೀಡಾಂಗಣದಲ್ಲಿ 1200 ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ 2 ವಾಲಿಬಾಲ್, 2 ಬಾಸ್ಕೆಟ್ ಬಾಲ್, 1 ಹ್ಯಾಂಡ್ ಬಾಲ್, 14 ಬ್ಯಾಡ್ಮಿಂಟನ್ ಅಂಕಣಗಳಿದ್ದು, ವಿಶೇಷವಾಗಿ ಪೆಡ್ಲೈಟ್, ವಿಶ್ರಾಂತಿ ಕೊಠಡಿ, ಕ್ರೀಡಾಪಟುಗಳಿಗೆ ವಸತಿ ಗೃಹ, ಅತಿಥಿಗೃಹ, ಶೌಚಾಲಯ ವ್ಯವಸ್ಥೆಯನ್ನು ಕ್ರೀಡಾಂಗಣಕ್ಕೆ ಕಲ್ಪಿಸಲಾಗಿದೆ.
ಸುಮಾರು 4.5 ಕೋಟಿ ರು. ವೆಚ್ಚದಲ್ಲಿ ಸರ್ಕಿಟ್ ಹೌಸ್ ನಿರ್ಮಾಣಗೊಂಡಿರುವ ಸುವರ್ಣ ಸಂಸ್ಕೃತಿ ಭವನವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಇದರಲ್ಲಿ ಆಡಳಿತ ಕಛೇರಿ ಸೇರಿದಂತೆ ಮಲೆನಾಡಿನ ಕಲೆಗಳ ಪ್ರದರ್ಶನ ಕಲಾಗ್ಯಾಲರಿ, ಸುಸಜ್ಜಿತ ಗ್ರಂಥಾಲಯ, ನಾಟಕ ರಿಹರ್ಸಲ್ ಕೊಠಡಿ ಹಾಗೂ 300 ಆಸನಗಳ ವ್ಯವಸ್ಥೆ ಜೊತೆಗೆ ಸಂಪೂರ್ಣ ಹವಾ ನಿಯಂತ್ರಣದಿಂದ ಕೂಡಿದೆ. ನಗರಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಟ್ಯಾಕ್ಸಿ ನಿಲ್ದಾಣ ಹಾಗೂ ಮುಂಗಡ ಪಾವತಿ, ಆಟೋ ನಿಲ್ದಾಣಕ್ಕೂ ಶಂಕು ಸ್ಥಾಪನೆ ನೆರವೇರಿಸಲಿರುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವರಾದ ಸಿ.ಎಂ.ಉದಾಸಿ, ರಾಮಚಂದ್ರೇ ಗೌಡ, ಗೂಳಿಹಟ್ಟಿ ಶೇಖರ್, ಹರತಾಳು ಹಾಲಪ್ಪ, ಬಾಲಚಂದ್ರ ಜಾರಕಿಹೊಳಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಹೆಚ್.ಶಂಕರ ಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ ಮುಂತಾದವರು ಭಾಗವಹಿಸಲಿದ್ದಾರೆ.