ಅವಳಿ ಸ್ಫೋಟ: ಹುಬ್ಬಳ್ಳಿಯಲ್ಲಿ ಐವರ ಸೆರೆ
ಕ್ರೀಡಾಂಗಣದ ಬಳಿ ಸಂಭವಿಸಿದ ಸ್ಫೋಟದ ಸಂದರ್ಭದಲ್ಲಿ ಹುಬ್ಬಳ್ಳಿ ಆವೃತ್ತಿಯ ಆಂಗ್ಲ ದಿನಪತ್ರಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಸಿಬ್ಬಂದಿ ಮಂಗಳ ವಾರ ಸಂಜೆ ನಗರಕ್ಕೆ ಆಗಮಿಸಿದ್ದರು. ಉತ್ತರಪ್ರದೇಶ ಮೂಲದವರು ಎನ್ನಲಾದರೂ ಹುಬ್ಬಳ್ಳಿಯ ಸಂಪರ್ಕ ಸಾಕಷ್ಟು ಇರುವ ಸಾಧ್ಯತೆಯಿದೆ. ಬಂಧಿತರ ಮಾಹಿತಿ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಅಧಿಕಾರಿಗಳಾಗಲಿ, ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳಾಗಲಿ ಈ ಸುದ್ದಿಯನ್ನು ದೃಢಪಡಿಸಿಲ್ಲ.
ಈ ಐವರು ಶಂಕಿತರು ಉತ್ತರ ಪ್ರದೇಶಕ್ಕೆ ಹೊರಟಿದ್ದರು ಎನ್ನಲಾಗಿದೆ. ಇವರು ನಗರದ ಶ್ರೀರಾಮ ರೆಸಿಡೆನ್ಸಿ ಯಲ್ಲಿ ಸುನೀಲರಾವ್ ಹಾಗೂ ಇರ್ಫಾನ್ ಹೆಸರಿನಲ್ಲಿ ಎರಡು ಕೊಠಡಿ ಪಡೆದಿದ್ದರು. ಮಂಗಳವಾರ ಇನ್ನೊಂದು ಕೊಠಡಿ ಬೇಕೆಂದು ಕೇಳಿದ್ದರು ಎಂದು ತಿಳಿದು ಬಂದಿದೆ. ಶಂಕಿತರ ಐವರಲ್ಲಿ ಒಬ್ಬ ಅಂಗವಿಕಲ ಕೂಡ ಇದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕ್ರೀಡಾಂಗಣದ ಬಳಿ ನಡೆದ ಬಾಂಬ್ ಕೃತ್ಯದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ನಿವೃತ್ತ ನೌಕರನ ಕೈವಾಡವಿದೆ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಪ್ರಸ್ತುತ ಈ ನೌಕರ ಸೇವೆಯಿಂದ ನಿವೃತ್ತಿ ಹೊಂದಿದ್ದು, ಕರಾವಳಿ ಮೂಲದವನಾಗಿದ್ದಾನೆ. ಅಲ್ಲದೇ, ರಾಜ್ಯ ಮೀಸಲು ಪಡೆ ಬಾಂಬ್ ನಿಷ್ಕ್ರೀಯ ದಳ ವಿಭಾಗದಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾನೆ ಎಂದು ಮಂಗಳವಾರ ಪೊಲೀಸ್ ಇಲಾಖೆ ಸುಳಿವು ಕೊಟ್ಟಿತ್ತು.