ರಾಮನಗರ ಮದ್ಯದಂಗಡಿಯಲ್ಲಿ ರೇಣುಕಾ ಮಹಾತ್ಮೆ
ರಾಮನಗರ, ಏ. 21 : ಸದಾ ಒಂದಿಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಬಿಜೆಪಿಯ ವಿವಾದಗ್ರಸ್ಥ ಸಚಿವ ರೇಣುಕಾಚಾರ್ಯ ಇಂದು ದಿಢೀರನೇ ರಾಮನಗರದ ಮದ್ಯದಂಗಡಿಗೆ ಭೇಟಿ ನೀಡಿ ನಕಲಿ ಮದ್ಯ ಮಾರಾಟದ ಜಾಲವನ್ನ ಬಯಲು ಮಾಡಿದ್ದಾರೆ. ಕಳೆದೊಂದು ವಾರದ ಹಿಂದೆಯೇ ರಾಮನಗರದ ಮಂಜೇಶ್ ಬಾರ್ನಿಂದ ಮದ್ಯವನ್ನು ಸಚಿವರ ಆಪ್ತರು ಖರೀದಿಸಿದ್ದರು. ಖರೀದಿ ಮಾಡಿದ್ದ ಮದ್ಯ ನಕಲಿಯೆಂದು ಧೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ಸಚಿವರು ಏಕಾಏಕಿ ದಾಳಿ ನಡೆಸಿ ಬಾರ್ನ ದಾಸ್ತಾನು ಪುಸ್ತಕವನ್ನು ಪರಿಶೀಲಿಸಿದ್ದರು. ಜಿಲ್ಲೆಯಾಧ್ಯಾಂತ ನಕಲಿ ಮದ್ಯವನ್ನು ಈ ಮದ್ಯದಂಗಡಿಯಿಂದಲೇ ಸರಬರಾಜು ಮಾಡಲಾಗುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಇತ್ತೆಂದು ಅಬಕಾರಿ ಸಚಿವರು ಹೇಳಿದರು.
ಖಚಿತ ಮಾಹಿತಿಯ ಜಾಡು ಹಿಡಿದ ಸಚಿವ ರೇಣುಕಾಚಾರ್ಯ ಅಬಕಾರಿ ಇಲಾಖಾಧಿಕಾರಿಗಳೊಂದಿಗೆ ದಾಳಿ ನಡೆಸಿ ಬಾರ್ಗಳಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲು ಮಾಡಿದರು. ಮಟಮಟ ಮಧಾಹ್ನವೇ ದಾಳಿಯಿಟ್ಟ ರೇಮುಕಾಚಾರ್ಯ ಗುಂಡೇರಿಸಿಕೊಳ್ಳುತ್ತಿದ್ದ ಪಾನಪ್ರಿಯರ ನಿಶೆ ಇಳಿಸಿದ್ದರು. ದಾಳಿಯ ನಂತರ ಸಂಪೂರ್ಣ ವರದಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಸಚಿವ ರೇಣುಕಾಚಾರ್ಯ ಹೇಳಿದರು.
ರೇಣುಕಾಚಾರ್ಯರು ಬಾರ್ನಲ್ಲಿರುವ ಮದ್ಯ ನಕಲಿಯೋ ಅಸಲಿಯೋ ಎಂದು ಮೂಗಿನ ಕೆಳಗೆ ಬಾಟಲಿ ಇಟ್ಟು ವಾಸನೆ ಎಳೆಯುತ್ತಿದ್ದರು. ಕಲಬೆರಕೆ ಮಧ್ಯ ಯಾವುದೆಂದು ಸಚಿವರೇ ಖಚಿತವಾಗಿ ಹೇಳುತ್ತಿದ್ದರು.
ಜಿಲ್ಲೆಯ ಮದ್ಯದಂಗಡಿಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದರೂ ಜಾಣಕುರುಡುತನ ಪ್ರದರ್ಶನ ಮಾಡುತ್ತಿರುವ ಅಬಕಾರಿ ಅಧಿಕಾರಿಗಳ ವೈಫಲ್ಯದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವರು ಈಗ ನಾನೇನು ಹೇಳುವುದಿಲ್ಲ ಮುಂದೆ ನೋಡಿ ಗೊತ್ತಾಗುತ್ತೆ ಎಂದು ಹೇಳಿ ನುಣುಚಿಕೊಂಡರು. ತಕ್ಷಣವೇ ನಕಲಿ ದಂಧೆಗೆ ಕಡಿವಾಣ ಹಾಕುವಲ್ಲಿ ಕ್ರಮಕೈಗೊಳ್ಳುವುದಾಗಿ ರೇಣುಕಾಚಾರ್ಯ ಹೇಳಿದರು.
ಗ್ರಾಮಪಂಚಾಯಿತಿ ಚುನಾವಣೆ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಬಕಾರಿ ಇಲಾಖೆಯಲ್ಲಿ ಬದಲಾವಣೆ ತರಲಾಗುವುದು. ಸರ್ಕಾರಕ್ಕೆ ಅನ್ಯಾಯವೆಸಗಿ ಬೊಕ್ಕಸಕ್ಕೆ ನಷ್ಟ ಮಾಡುತ್ತಿರುವ ಲಿಕ್ಕರ್ ಲಾಬಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೂತನ ಯೋಜನೆಯನ್ನು ಜಾರಿಗೆ ತರಲಾಗುವುದೆಂದು ರೇಣುಕಾಚಾರ್ಯ ಹೇಳಿದರು.