ಮೋದಿ ಬ್ಯಾಟಿಂಗ್, ತರೂರ್ ಹಿಟ್ ವಿಕೆಟ್
ಎರಡು ಗಂಟೆಗಳಿಗೂ ಅಧಿಕ ಕಾಲ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರಧಾನಿ ಮನ ಮೋಹನ್ ಸಿಂಗ್, ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ, ಎಕೆ ಅಂಟನಿ ಹಾಗೂ ಅಹ್ಮದ್ ಪಟೇಲ್ ಭಾಗವಹಿಸಿದ್ದರು. ಎಲ್ಲರೂ ಒಕ್ಕೊರಲಿನಿಂದ ಶಶಿ ತರೂರ್ ಅವರನ್ನು ಸಂಪುಟದಿಂದ ಹೊರ ಹಾಕುವುದೇ ಸೂಕ್ತ ಎಂದು ನಿರ್ಣಯ ಕೈಗೊಂಡರು ಎನ್ನಲಾಗಿದೆ.
ಮೋದಿ ಕಥೆ: ಇದಕ್ಕೂ ಮುನ್ನ ಕೊಚ್ಚಿ ಐಪಿಎಲ್ ತಂಡ ಖರೀದಿ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಲು ಭಾನುವಾರ ರಾತ್ರಿ ಸುಮಾರು 45 ನಿಮಿಷಗಳ ಕಾಲ ಪ್ರಧಾನಿ ಅವರೊಡನೆ ಶಶಿ ಚರ್ಚೆ ನಡೆಸಿದ್ದರು. ಸುನಂದಾ ಕೂಡ ಕೊಚ್ಚಿ ತಂಡದ ಷೇರುಗಳನ್ನು ತ್ಯಜಿಸಿದ್ದರು. ಇತ್ತ ಲಲಿತ್ ಮೋದಿ ಹಣೆಬರಹ ಏ.25 ರಂದು ನಡೆಯುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರವಾಗಲಿದೆ. ಆದರೆ, 2012 ರ ವರೆಗೂ ಅವರನ್ನು ಐಪಿಎಲ್ ಆಯುಕ್ತರನ್ನಾಗಿ ನೇಮಕ ಮಾಡಿರುವುದರಿಂದ ಅವರ ತಲೆದಂಡ ಸಾಧ್ಯವಿಲ್ಲದಿದ್ದರೂ, ಅಧಿಕಾರವನ್ನು ಮೊಟಕುಗೊಳಿಸಬಹುದು. ಏ.23 ರಂದು ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಐಪಿಎಲ್ ತಂಡಗಳ ಆಯವ್ಯಯದ ವಿವರ ನೀಡುವ ತಯಾರಿಯಲ್ಲಿದ್ದಾರೆ ಮೋದಿ. ಇತ್ತ ಬಿಜೆಪಿ ಸುನಂದಾ, ಶಶಿ ಇಬ್ಬರೂ ತಪ್ಪಿಸ್ಥರು ಎಂದು ಒಪ್ಪಿಕೊಂಡಂತಾಗಿದೆ. ಎಲ್ಲಾ ತಂಡಗಳ ತನಿಖೆ ನಡೆಯಲಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.