ಬಾಂಬ್ ಸ್ಫೋಟದ ನಂತರವೂ ಪಂದ್ಯ ನಡೆಸಿದ್ದೇಕೆ?
ಕಡಿಮೆ ತೀವ್ರತೆಯ ಬಾಂಬ್ ಸ್ಪೋಟವಾದ ಒಂದು ಗಂಟೆಯ ಒಳಗೆ ಬೆಂಗಳೂರು ಮತ್ತು ಮುಂಬೈ ತಂಡದ ನಡುವೆ ಪಂದ್ಯ ಮುಂದುವರಿಯಲು ರಾಜ್ಯ ಸರಕಾರ ಅನುವು ಮಾಡಿಕೊಟ್ಟಿತ್ತು. ಅಲ್ಲದೆ, ಕ್ರೀಡಾಂಗಣದ ಸುತ್ತ ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ಕೂಡಲೆ ಸ್ಥಳದಿಂದ ತೆರವು ಮಾಡಿಸಿರಲಿಲ್ಲ. ಈ ಕುರಿತಂತೆ ತಕ್ಷಣ ವರದಿ ನೀಡಬೇಕೆಂದು ಎರಡನೇ ಬಾರಿ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ತಾಕೀತು ಮಾಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಪುಣೆಯಲ್ಲಿ ಬಾಂಬ್ ಸ್ಫೋಟವಾದ ನಂತರ ಬೆಂಗಳೂರು, ಮುಂಬೈ ಮತ್ತು ದೆಹಲಿ ಉಗ್ರರ ಗುರಿಯಾಗಿದೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಹೆಚ್ಚಿನ ದಾಳಿ ನಡೆಸಲು ಹೊಂಚು ಹಾಕುತ್ತಿದೆ ಎಂದು ಬೇಹುಗಾರಿಕಾ ದಳ ವರದಿ ನೀಡಿತ್ತು. ಈ ಕುರಿತಂತೆ ರಾಜ್ಯದೊಡನೆ ಕೂಡ ಚರ್ಚಿಸಲಾಗಿತ್ತು. ಆದಾಗ್ಯೂ, ಎಚ್ಚರಿಕೆ ಕಳೆದುಕೊಂಡ ಕರ್ನಾಟಕ ಸರಕಾರದ ವಿರುದ್ಧ ಕೇಂದ್ರ ಕೆಂಗಣ್ಣು ಬೀರಿದೆ. ಕ್ರೀಡಾಂಗಣದ ಗೇಟ್ ಬಳಿಯೇ ಬಾಂಬ್ ಇಟ್ಟಿದ್ದನ್ನು ಕಂಡುಹಿಡಿಯಲು ವಿಫಲವಾಗಿದ್ದೇಕೆ ಎಂದು ಕೇಂದ್ರ ಗೃಹಮಂತ್ರಾಲಯ ಆಕ್ರೋಶ ವ್ಯಕ್ತಪಡಿಸಿದೆ. ಪಂದ್ಯ ನಡೆದ ಮರುದಿನವೂ ಬಾಂಬ್ ಗಳು ದೊರೆತಿದ್ದವು.
ವಿದೇಶಿಯರನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದನಾ ದಾಳಿ ನಡೆಸಲಾಗುತ್ತಿದೆ ಎಂದು ಬೇಹುಗಾರಿಕಾ ದಳ ಹೇಳಿತ್ತು. ಪುಣೆಯಲ್ಲಿ ಕೂಡ ವಿದೇಶಿಯರನ್ನು ಗುರಿಯಾಗಿಟ್ಟು ದಾಳಿ ನಡೆಸಲಾಗಿತ್ತು. ಐಪಿಎಲ್ ತಂಡಗಳಲ್ಲಿ ಅನೇಕ ವಿದೇಶಿ ಕ್ರಿಕೆಟಿಗರು ಆಡುತ್ತಿದ್ದಾರೆ. ಆಟ ನೋಡಲು ಅನೇಕ ವಿದೇಶಿ ಪ್ರಜೆಗಳು ಕೂಡ ಕ್ರೀಡಾಂಗಣಕ್ಕೆ ಬರುತ್ತಾರೆ. ಕೆಲ ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತದಲ್ಲಿನ ವಿದೇಶಿಯರ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದರು.
ಈ ದಾಳಿಯ ಹಿನ್ನೆಲೆಯಲ್ಲಿ ಮುಂಬರುವ ಎಲ್ಲಾ ಐಪಿಎಲ್ ಪಂದ್ಯಗಳ ಮೇಲೆ ತೀವ್ರ ನಿಗಾ ಇಡುವಂತೆ ಆಯಾ ರಾಜ್ಯಗಳಿಗೆ ಕೇಂದ್ರ ಎಚ್ಚರಿಸಿದೆ. ಇಂದು ಕೊಲ್ಕತಾದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, 21 ಮತ್ತು 22ರಂದು ಸೆಮಿ ಫೈನಲ್ ಮುಂಬೈನಲ್ಲಿ ನಡೆಯಲಿದೆ. ಫೈನಲ್ ಏಪ್ರಿಲ್ 25ರಂದು ಮುಂಬೈನಲ್ಲಿಯೇ ನಡೆಯಲಿದೆ.
ಇಷ್ಟೆಲ್ಲ ನಡೆದಿದ್ದರೂ ಸಂಪೂರ್ಣ ಸುರಕ್ಷಿತವಾಗಿ ಸೆಮಿಫೈನಲ್ ನಡೆಸುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಸಬೇಕಾಗಿದ್ದ ಸೆಮಿಫೈನಲ್ ಪಂದ್ಯಗಳನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ.