ಸ್ಫೋಟಗೊಂಡಿದ್ದು ಕಡಿಮೆ ತೀವ್ರತೆಯ ಬಾಂಬ್
ಚಿನ್ನಸ್ವಾಮಿ ಸ್ಟೇಡಿಯಂನ ಅನಿಲ್ ಕುಂಬ್ಳೆ ವೃತ್ತದ ಬಳಿಯಿರುವ 12ನೇ ಗೇಟ್ ಬಳಿ ಸ್ಫೋಟ ಸಂಭವಿಸಿದೆ. ಅನಿಲ್ ಕುಂಬ್ಳೆ ವೃತ್ತದಲ್ಲಿಯೂ ಕಡಿಮೆ ತೀವ್ರತೆಯ ಇನ್ನೊಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೆ ಗಾಯವಾಗಿದ್ದು ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮಹತ್ವದ ಪಂದ್ಯ ನಡೆಯುತ್ತಿದೆ. ಐಪಿಎಲ್ 3ನೇ ಆವೃತ್ತಿಯಲ್ಲಿ ಬೆಂಗಳೂರು ತಂಡ ಸೆಮಿ ಫೈನಲ್ ತಲುಪುವ ಹಂತ ತಲುಪಿದೆ. ಇಂದಿನ ಗೆಲುವು ಸೆಮಿ ಫೈನಲ್ ಹಾದಿಯನ್ನು ಸುಗಮಗೊಳಿಸಲಿದೆ.
ಸ್ಫೋಟ ಸಂಭವಿಸಿದ್ದರಿಂದ ಎರಡೂ ತಂಡದ ಆಟಗಾರರು ಮೈದಾನದ ಮೇಲೆ ಇಳಿಯಲು ಹಿಂಜರಿಯುತ್ತಿದ್ದಾರೆ. ಆದರೆ, ಪ್ರೇಕ್ಷಕರ ಸ್ಫೋಟವನ್ನು ನಿರ್ಲಕ್ಷಿಸಿ ಆಟ ವೀಕ್ಷಿಸಲು ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದಾರೆ. ಕ್ರೀಡಾಂಗಣ ಪ್ರವೇಶಿಲು ಈಗಲು ಕೂಡ ನೂರಾರು ಪ್ರೇಕ್ಷಕರು ಜಮಾಯಿಸುತ್ತಿದ್ದಾರೆ. ಸ್ಫೋಟ ಸಂಭವಿಸಿದ್ದರಿಂದ ಪಂದ್ಯ ತುಸು ತಡವಾಗಿ ಆರಂಭವಾಗಿದೆ.
ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಜನ ಯಾವುದೇ ರೀತಿಯಲ್ಲಿ ಆತಂಕಕ್ಕೊಳಗಾಗುವ ಕಾರಣವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಮನವಿ ಮಾಡಿಕೊಂಡಿದ್ದಾರೆ.
ಸ್ಫೋಟಗೊಂಡ ಸ್ಥಳವನ್ನು ವೀಕ್ಷಿಸಲು ರಸ್ತೆ ಸಂಚಾರಿಗಳು ನಿಲ್ಲುತ್ತಿರುವುದರಿಂದ ಕ್ರೀಡಾಂಗಣದ ಸುತ್ತಮುತ್ತ ವಿಪರೀತ ವಾಹನ ದಟ್ಟಣೆ ಸೃಷ್ಟಿಯಾಗಿದೆ. ಸಂಚಾರವನ್ನು ಸುಗಮಗೊಲಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಡುತ್ತಿದ್ದಾರೆ. 2008ರ ಜುಲೈ 25ರಂದು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಜರುಗಿದ ಪ್ರಮುಖ ಘಟನೆ ಇದಾಗಿದೆ.
ಕನ್ನಡದಲ್ಲಿ ಸ್ಕೋರ್ ವಿವರ ತಿಳಿಯಲು ಇಲ್ಲಿ ಕ್ಲಿಕ್ಕಿಸಿ