ಸ್ಫೋಟದ ಬಗ್ಗೆ ಆತಂಕ ಬೇಡ : ಬಿದರಿ
ಬಾಂಬ್ ಸ್ಫೋಟದ ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರು ಸ್ಫೋಟದ ಬಗ್ಗೆ ಆತಂಕ ಪಡುವ ಅಗತ್ಯ. ಪಂದ್ಯಕ್ಕೆ ಬೇಕಿರುವ ಸಕಲ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು. ಘಟನೆಯನ್ನು ಸಿಸಿಬಿ ಪೊಲೀಸರಿಗೆ ವಹಿಸುತ್ತೇವೆ. ಘಟನೆಗೆ ಕಾರಣರಾದ ಆರೋಪಿಗಳನ್ನು ಎಲ್ಲಿದ್ದರೂ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಧ್ಯಾಹ್ನ 3.15ರ ಸುಮಾರಿಗೆ ಬಾಂಬ್ ಸ್ಫೋಟಿಸಲಾಗಿದೆ. ಒಟ್ಟು 5 ಮಂದಿ ಗಾಯಗೊಂಡಿದ್ದು, ಅದರಲ್ಲಿ 2 ಪೇದೆಗಳು, 2 ಮುಖ್ಯಪೇದೆಗಳು ಮತ್ತು ಇನ್ನೂಬ್ಬರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಪೊಲೀಸರು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿದರಿ ಹೇಳಿದ್ದಾರೆ. ಜನರೇಟರ್ ಕೆಳಗಡೆ ಕಡಿಮೆ ತೀವ್ರತೆಯ ಸ್ಫೋಟಗಳನ್ನು ಇಟ್ಟು ಸ್ಫೋಟಿಸಲಾಗಿದೆ. ಕವರ್ ನಲ್ಲಿ ನಟ್ ಮತ್ತು ಬೋಲ್ಟ್ ಗಳನ್ನು ಇರಿಸಿ ಕೃತ್ಯ ನಡೆಸಲಾಗಿದೆ ಎಂದು ಹೇಳಿದರು.
ಇವತ್ತು ಮಧ್ಯಾಹ್ನ ಕ್ರೀಡಾಂಗಣ ಹೊರಗಡೆ ನಡೆದ ಸ್ಫೋಟ ಕಡಿಮೆ ತೀವ್ರತೆ ಹೊಂದಿದ್ದು, ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಜನ ಸಾಮಾನ್ಯರಿಗೆ ಏನೂ ಆಗಿಲ್ಲ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ತೆರಳಿದ್ದು, ಪರೀಕ್ಷೆ ಆರಂಭಿಸಿದ್ದಾರೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೂ ಇಂದಿನ ಸ್ಫೋಟಕ್ಕೂ ಯಾವುದೇ ಸಾಮ್ಯತೆ ಇಲ್ಲ. ಘಟನೆ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ ಎಂದು ಆಚಾರ್ಯ ವಿವರಿಸಿದರು.