ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟ : ಬೆಂಗಳೂರಿಗೆ ಎಚ್ಚರಿಕೆಯ ಗಂಟೆ

By Prasad
|
Google Oneindia Kannada News

Bomb blasts in Bengaluru, a wake up call
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿರುವ ಎರಡು ಸ್ಫೋಟಗಳು ಬೆಂಗಳೂರನ್ನು ಸುದೀರ್ಘ ನಿದ್ದೆಯಿಂದ ಎಚ್ಚೆತ್ತುಕೊಳ್ಳುವಂತೆ ಮಾಡಿವೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಎರಡು ವರ್ಷಗಳ ಹಿಂದೆ 2008ರ ಜುಲೈ 25ರಂದು ಬೆಂಗಳೂರಿನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟಗಳ ನಂತರ ನಡೆದ ಪ್ರಮುಖ ಘಟನೆ ಇದು.

ಸ್ಫೋಟಗಳ ತೀವ್ರತೆ ಕಡಿಮೆಯಿದ್ದು ಯಾವುದೇ ಸಾವು ನೋವು ಸಂಭವಿಸದಿದ್ದರೂ ಬೆಂಗಳೂರು ಪೊಲೀಸ್ ಮತ್ತು ರಾಜ್ಯ ಸರಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಬೆದರಿಕೆ ಒಡ್ಡಲೆಂದು ಅಥವಾ ಮುನ್ನೆಚ್ಚರಿಕೆ ನೀಡಲೆಂದು ಈ ದುಷ್ಕೃತ್ಯ ನಡೆಸಿರಬಹುದಾಗಿದೆ. ಇದು ಭಯೋತ್ಪಾದಕರು ನಗರದೊಳಗೆ ನುಸುಳಿಸಬಹುದಾದ ಸೂಚನೆ ಇರಬಹುದೆ? ತನಿಖೆಯಿಂದ ನಿಖರ ಮಾಹಿತಿ ಹೊರಬರಬೇಕಿದೆ.

ಸರಣಿ ಸ್ಪೋಟ ನಡೆದ ನಂತರ ಬೆಂಗಳೂರಿಗೆ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಪಿಂಗ್ ಮಾಲ್ ಸೇರಿದಂತೆ ಪ್ರತಿಯೊಂದು ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಭಯೋತ್ಪಾದಕರ ಪ್ರತಿ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ. ಇಷ್ಟಾಗಿಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನಾಹುತ ಸಂಭವಿಸಿದೆ. ಕೊಂಚ ಎಚ್ಚರ ತಪ್ಪಿದ್ದರೂ ಭಯೋತ್ಪಾದಕರು ಸ್ಟೇಡಿಯಂ ಒಳಗೂ ನುಸುಳಿ ಹೆಚ್ಚಿನ ಅನಾಹುತ ಮಾಡಬಹುದಿತ್ತು.

ಎಲ್ಲಕ್ಕಿಂತ ಆಶ್ಚರ್ಯ ತರುವಂಥ ಸಂಗತಿಯೆಂದರೆ, ಮಧ್ಯಾಹ್ನ 3.15ಕ್ಕೆ ಸ್ಫೋಟಗಳು ಸಂಭವಿಸಿದ್ದರೂ ಆ ಜಾಗದಿಂದ ವಾಹನ ಸಂಚಾರದ ದಿಕ್ಕು ಬದಲಿಸುವ ಅಥವಾ ಕ್ರೀಡಾಂಗಣದ ಸುತ್ತ ಸೇರಿದ್ದ ಪ್ರೇಕ್ಷಕರನ್ನು ಸ್ಟೇಡಿಯಂನಿಂದ ದೂರ ಸರಿಸುವ ಪ್ರಯತ್ನ ಪೊಲೀಸರು ಮಾಡಿಲ್ಲ. ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಪ್ರೇಕ್ಷಕರಿಗೆ ಬೇಕಿದ್ದು ಒಂದೇ, ಅದು ಪಂದ್ಯ ವೀಕ್ಷಣೆ. ಗೇಟ್ 12ರ ಬಳಿ ಸ್ಫೋಟಗೊಂಡಾಗ ಅಷ್ಟೊಂದು ಜನ ಸೇರಿರಲಿಲ್ಲ. ಪಂದ್ಯ ಶುರುವಾಗುವ ಮೊದಲು ಗೇಟ್ ಬಳಿ ಸಾವಿರಾರು ಜನ ಸೇರಿದಾಗ ಸ್ಫೋಟ ಸಂಭವಿಸಿದ್ದರೆ?

ಸ್ಟೇಡಿಯಂನಲ್ಲಿ ಭದ್ರತಾ ವ್ಯವಸ್ಥೆ ಉತ್ತಮವಾಗಿದ್ದರಿಂದ ಸ್ಫೋಟಗಳನ್ನು ಕ್ರೀಡಾಂಗಣದ ಒಳಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಪಂದ್ಯವನ್ನು ರದ್ದು ಮಾಡದೆ ಆಟ ನಡೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ರಾಜ್ಯ ಪೊಲೀಸರ ಕ್ರಮವನ್ನು ಮೆಚ್ಚಬೇಕು. ಒಂದು ಮಾಹಿತಿಯ ಪ್ರಕಾರ, ಮಿನರಲ್ ನೀರಿನ ಬಾಟಲಿ ಮಾರುವವರು ಈ ಕೃತ್ಯ ನಡೆಸಿದ್ದಾರೆ. ಕ್ರೀಡಾಂಗಣದಲ್ಲಿ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡದ ಕಾರಣ ಬಾಂಬ್ ಸ್ಟೇಡಿಯಂ ಒಳಪ್ರವೇಶಿಸಲು ಸಾಧ್ಯವಾಗಿಲ್ಲ.

ಐಪಿಎಲ್ ಪಂದ್ಯಾವಳಿಗಳಿಗೆ ಭಾರಿ ಬಿಗಿ ಭದ್ರತೆಯನ್ನು ನೀಡಬೇಕು ಎಂದು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಸೂಚನೆಯಂತೆ ರಾಜ್ಯ ಸರಕಾರ ಪೊಲೀಸ್ ಬಂದೋಬಸ್ತ್ ನಿಯೋಜಿಸಿತ್ತು. ಆದರೆ, ಇಂತಹ ಬಿಗಿ ಪಹರೆ ನಡುವೆಯೂ ಸ್ಪೋಟ ಘಟನೆ ನಡೆದಿದೆ. ಘಟನೆ ಬಗ್ಗೆ ಕೂಡಲೇ ಪ್ರಾಥಮಿಕ ವರದಿಯನ್ನು ಕಳುಹಿಸಿಕೊಡುವಂತೆ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದಾರೆ. ಈ ಘಟನೆ ರಾಷ್ಟ್ರದ ಇತರ ಸ್ಥಳಗಳಲ್ಲಿ ನಡೆಯುತ್ತಿರುವ ಐಪಿಎಲ್ 3ನೇ ಆವೃತ್ತಿಯ ಪಂದ್ಯಗಳ ಮೇಲೂ ಕರಿನೆರಳು ಬೀಳುವಂತೆ ಮಾಡಿದೆ. ಪಂದ್ಯ ನಡೆಯುವ ಎಲ್ಲ ರಾಜ್ಯಗಳ ಸರಕಾರಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X