ಐಪಿಎಲ್ : ಕಲೆ ತೊಳೆಯುವ ಹೊಣೆ ಶಶಿ ಮೇಲೆ
ಈ ಕುರಿತಂತೆ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಐಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳಿಗೆ ಲೋಕಸಭೆಯಲ್ಲಿ ಉತ್ತರ ನೀಡಬೇಕೆಂದು ತರೂರ್ ಅವರಿಗೆ ತಾಕೀತು ಮಾಡಿದ್ದಾರೆ. ಪ್ರಧಾನಿ ಅನುಪಸ್ಥಿತಿಯಲ್ಲಿ ಶಶಿ ತರೂರ್ ಅವರನ್ನು ಬರಮಾಡಿಕೊಂಡಿದ್ದ ಪ್ರಣಬ್ ಮುಖರ್ಜಿ ಅವರು ರಕ್ಷಣಾ ಸಚಿವ ಎಕೆ ಆಂಟನಿ ಅವರ ಸಮ್ಮುಖದಲ್ಲಿ ಶಶಿ ತರೂರ್ ಅವರ ಕಥೆಯನ್ನು ಆಲಿಸಿದ್ದರು.
ತರೂರ್ ಅವರ ತಲೆದಂಡಕ್ಕೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ಹೆಗಲೇರಿ ಕುಳಿತಿವೆ. ಈ ಕುರಿತಂತೆ ವಿರೋಧ ಪಕ್ಷದ ಆಗ್ರಹಕ್ಕೆ ಮನ್ನಣೆ ನೀಡದ ಯುಪಿಎ ಸರಕಾರ ಶಶಿ ತರೂರ್ ಅವರಿಗೂ ಯಾವುದೇ ಆಸ್ವಾಸನೆ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಸದ್ಯಕ್ಕೆ ಶಶಿ ತರೂರ್ ಅವರ ರಾಜಕೀಯ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮನಮೋಹನ ಸಿಂಗ್ ಭಾರತಕ್ಕೆ ಮರಳಿದ ನಂತರ ಸೂಕ್ತ ನಿರ್ಧಾರ ತಳೆಯಲು ಕಾಂಗ್ರೆಸ್ ನಿರ್ಧರಿಸಿದೆ. ತರೂರ್ ಅವರ ವಿರುರ್ಧದ ಆರೋಪ ಸಾಬೀತಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಖಂಡಿತ ಎಂದು ಸಿಂಗ್ ಹೇಳಿದ್ದಾರೆನ್ನಲಾಗಿದೆ.
ಕೊಚ್ಚಿ ಫ್ರಾಂಚೈಸಿಗೆ ಸಂಬಂಧಿಸಿದಂತೆ ಐಪಿಎಲ್ ಚೇರ್ಮನ್ ಲಲಿತ್ ಮೋದಿ ಮತ್ತು ಶಶಿ ತರೂರ್ ಅವರ ನಡುವಿನ ಜಟಾಪಟಿ ತಾರಕಕ್ಕೇರಿದೆ. ಕೊಚ್ಚಿ ತಂಡ ಕೊಳ್ಳಲು ಆಸಕ್ತಿವಹಿಸಿರುವ ಶಶಿ ಅವರ ಪ್ರೇಯಸಿ ಸುನಂದಾ ಪುಷ್ಕರ್ ಅವರ ಹೆಸರನ್ನು ಮೋದಿ ಪ್ರಸ್ತಾಪಿಸಿದ್ದೇ ಇಬ್ಬರ ನಡುವಿನ ಕದನಕ್ಕೆ ನಾಂದಿ ಹಾಡಿದೆ.