ಹಂಪಿ ವಿವಿ ಮಸಿ ಪ್ರಕರಣ, ವಿದ್ಯಾರ್ಥಿಗಳ ಸೆರೆ
ಬಂಧಿತರು ವಿದ್ಯಾರ್ಥಿಗಳು ಧರ್ಮರಾಜ್ (22), ಗುರುರಾಜ (24) ಮತ್ತು ಚಿಂತಾಮಣಿ (25). ಹಾಸ್ಟಲ್ ವಾರ್ಡನ್ ಜನಾರ್ಧನ್ ಅವರ ಕಿರುಕುಳ ತಾಳಲಾರದೇ ಎಲ್ಲರ ಗಮನ ಸೆಳೆಯಲಿಕ್ಕಾಗಿ ತಾವು ಮಹನೀಯರ ಭಾವಚಿತ್ರಗಳಿಗೆ ಮಸಿ ಬಳಿದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಕನ್ನಡ ವಿವಿಯಲ್ಲಿ ಅಂಬೇಡ್ಕರ್ ಜಯಂತಿ : ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ ಪ್ರೀತಿ, ಗಂಭೀರ ಅಧ್ಯಯನವನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಆದರ್ಶವನ್ನು ತಮ್ಮದಾಗಿಸಿಕೊಳ್ಳಬೇಕೆಂದು ಹಂಪೆ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಎ.ಮುರಿಗೆಪ್ಪ ಅವರು ಕರೆ ನೀಡಿದರು.
ಹಂಪಿ ಕನ್ನಡ ವಿವಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಹಾಸ್ಟೆಲ್ನಲ್ಲಿ ಬುಧವಾರ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅಧ್ಯಯನ ನಡೆಸಲು 25 ಲಕ್ಷ ರು. ವೆಚ್ಚದಲ್ಲಿ ಕೋಣೆಗಳನ್ನು ಕಟ್ಟಿಸಿಕೊಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಲಸಚಿವ ಮಂಜುನಾಥ ಬೇವಿನಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಗಂಭೀರ ಅಧ್ಯಯನ ನಿರತರಾದಾಗ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸೋಮವಾರ ರಾತ್ರಿ ಮಹನೀಯರ ಭಾವಚಿತ್ರಗಳಿಗೆ ಮಸಿ ಬಳಿದ ಪ್ರಕರಣದ ಹಿನ್ನಲೆಯಲ್ಲಿ ಹಂಪೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಅತ್ಯಂತ ಶಾಂತಿಯುತವಾಗಿ ಮಹನೀಯರ ಜಯಂತಿಗಳು ಆಚರಿಸಲ್ಪಟ್ಟವು.