ಒಂದೇ ದಿನ 2500 ಕೋಳಿ, 50 ಗಿಳಿ, 2 ಜನ ಬಲಿ!
ಪಿರಿಯಾಪಟ್ಟಣ ತಾಲೂಕಿನ ಕೆಳಗನಹಳ್ಳಿಯಲ್ಲಿ ರಾಮಶೆಟ್ಟಿ (41) ಎಂಬುವರು ತಮ್ಮ ಜಮೀನಿನಲ್ಲಿ ನೀರು ಹಾಯಿಸಲು ತೆರಳಿದ್ದ ಸಂದರ್ಭದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೈಸೂರು ಕೆ.ಆರ್.ರಸ್ತೆಯ ಫಾಲ್ಕನ್ ಟೈಯರ್ಸ್ ಬಳಿ ಗೋಡೆ ಕುಸಿದು ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಬಳಿಯ ಗಾನಾಳು ಬೀರೋಟ ಗ್ರಾಮದಲ್ಲಿ ಬಿರುಗಾಳಿ ಮತ್ತು ಆಲಿಕಲ್ಲು ಮಳೆಗೆ ಸುಮಾರು 20ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಎರಡು ಹಸುಗಳು ಮೃತಪಟ್ಟಿವೆ. ರೇಷ್ಮೆ ಸಾಕಣೆ ಕೇಂದ್ರ ಕುಸಿದು ಬಿದ್ದಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ಆಲಿಕಲ್ಲು ಮಳೆಗೆ ದಪ್ಪ ಮೆಣಸಿನಕಾಯಿ, ಬೀನ್ಸ್, ಟೊಮೆಟೊ ಸೇರಿದಂತೆ ನಾನಾ ತರಕಾರಿ ಬೆಳೆಗಳು ನಷ್ಟಕ್ಕೀಡಾಗಿವೆ.
ಪಟ್ಟಣದ ರೈಲ್ವೆ ನಿಲ್ದಾಣ ಹಾಗೂ ಕಾವೇರಿ ಶಾಲೆ ಬಳಿ ಮರದಲ್ಲಿ ವಾಸವಿದ್ದ 50ಕ್ಕೂ ಹೆಚ್ಚು ಗಿಳಿಗಳು ಮೃತಪಟ್ಟಿವೆ.ಹುಣಸೂರು, ಚಾಮರಾಜನಗರ, ಕೃಷ್ಣರಾಜನಗರಗಳಲ್ಲಿಯೂ ಭಾರಿ ಮಳೆ ಬಿದ್ದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಭಾಗದಲ್ಲಿ ಪಪ್ಪಾಯಿ, ಬಾಳೆ ಬೆಳೆಗಳಿಗೆ ಹಾನಿಯಾಗಿದೆ. ಹೊಸದುರ್ಗ ತಾಲೂಕಿನ ಕಡವಿಗೆರೆ ಯಲ್ಲಿ ಬಾಳೆ, ತೆಂಗಿನ ಮರಗಳು ಬುಡಮೇಲಾಗಿವೆ. ವಿದ್ಯುತ್ ಕಂಬಗಳು ಧರೆಗುರು ಳಿವೆ. ದಾವಣಗೆರೆಯಲ್ಲಿಯೂ ಮಳೆಯಾದ ವರದಿಯಾಗಿದೆ. ಆಲಿಕಲ್ಲು ಮಳೆಗೆ ಸಿರುಗುಪ್ಪ ತಾಲೂಕಿನ ನೂರಾರು ಎಕರೆ ಭತ್ತ ನೆಲ ಕಚ್ಚಿದೆ.
ನೂರಾರು ವಿದ್ಯುತ್ ಕಂಬ, ಮರ, ಗುಡಿಸಲುಗಳು ಬಿದ್ದಿವೆ. 10ಕ್ಕೂ ಹೆಚ್ಚು ಅಕ್ಕಿಗಿರಣಿಗಳಿಗೆ ಧಕ್ಕೆಯಾಗಿದೆ. ಪಟ್ಟಣದಲ್ಲಿ ಸೋಮವಾರ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ತಾಲೂಕಿನ ಮಂಗಳಾಪುರದಲ್ಲಿ ಮಂಜುನಾಥ ಕುಬ್ಬಣ್ಣ ಬಾವಿಗೆ ಸೇರಿದ ಕೋಳಿ ಫಾರಂ ಬಿದ್ದು ಅಂದಾಜು 2500 ಕೋಳಿಗಳು ಮೃತಪಟ್ಟಿವೆ. ಗ್ರಾಮದ ಇಬ್ಬರು ಗಾಯಗೊಂಡಿದ್ದು, ಎತ್ತೊಂದು ಮೃತಪಟ್ಟಿದೆ.