ವಿಶ್ವಖ್ಯಾತ ಕಸೂತಿ ಕಲೆ ಬಂಜಾರರ ಹಿರಿಮೆ
ಅವರು ಜಿಲ್ಲಾ ಬಂಜಾರ ಸಮಾಜದ ಬಾಲಕರ ವಸತಿ ನಿಲಯದಲ್ಲಿ ಜಿಲ್ಲಾ ಬಂಜಾರ ಮಹಿಳಾ ಸೇವಾ ಸಂಘ (ರಿ) ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಬಂಜಾರ ಸಮಾಜದ ಮಹಿಳೆಯರಲ್ಲಿ ಬುದ್ದಿವಂತಿಕೆ ಇದೆ. ಕಲಾತ್ಮಕತೆ ಇದೆ. ಅವರು ಹಾಕುವ ಕಸೂತಿ ಕಲೆ ದೇಶದಲ್ಲಷ್ಟೇ ಅಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ ಎಂದರು.
ಸ್ವ ಸಹಾಯ ಸಂಘಗಳ ಮೂಲಕ ತಾವು ತಯಾರಿಸಿದ ಉತ್ಪನ್ನಗಳನ್ನು ಸರಿಯಾದ ಮಾರುಕಟ್ಟೆ ಹುಡುಕಿ ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಸಮಾಜದ ಮಹಿಳಾ ಸಂಘಟನೆಯಲ್ಲಿ ಎಲ್ಲ ಮಹಿಳೆಯರು ಸಮಾನ ಮನಸ್ಸಿನಿಂದ ಕ್ರಿಯಾಶೀಲರಾಗಿ ಪಾಲ್ಗೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು. ಬಂಜಾರ ಮಹಿಳೆಯರು ತಮ್ಮ ತನವನ್ನು ಉಳಿಸಿಕೊಂಡು ಹೋಗುವತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಗೀತಾ, ತಾಯಿ ಮತ್ತು ಮಕ್ಕಳ ಮರಣದ ಅನುಪಾತ ದರ ರಾಷ್ಟ್ರ ಮಟ್ಟದಲ್ಲಿ 113 ಇದೆ. ಶಿವಮೊಗ್ಗದಲ್ಲಿ ಈ ಹಿಂದೆ ಅದು 136 ರಷ್ಟಿತ್ತು. ಇದು ನಿಲ್ಲಬೇಕು ಎಂದು ತಿಳಿಸಿದರು. ತಾಯಿ ಮರಣ ಹೊಂದಿದರೆ ಕುಟುಂಬಕ್ಕೆ ತುಂಬಾ ನಷ್ಟ. ಮಹಿಳೆಯರ ಲಿಂಗಾನುಪಾತ ಕಡಿಮೆಯಾಗಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು ಭ್ರೂಣ ಲಿಂಗ ಪರೀಕ್ಷೆ ಮಾಡಿಸುವುದೇ ಈ ಎಲ್ಲ ಅವಘಡಗಳಿಗೆ ಕಾರಣ ಎಂದು ವಿಶ್ಲೇಷಿಸಿದರು.
ಆರೋಗ್ಯಕ್ಕೆ ಮಹತ್ವ ನೀಡಿ: ಮಹಿಳೆಯರು ಆರೋಗ್ಯದ ಕಡೆ ಗಮನ ಹರಿಸಿ ಸಾಂಸ್ಥಿಕ ಹೆರಿಗೆಗೆ ಹೆಚ್ಚಿನ ಒತ್ತು ನೀಡವೇಕು. ಮನೆಗಳಲ್ಲಿ ಹೆರಿಗೆಯಾಗದಂತೆ ನಿಗಾ ವಹಿಸಬೇಕೆಂದು ಡಾ.ಗೀತಾ ತಾಕೀತು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಪ್ರೊ.ಬಿ.ಸಾಕಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಂಘಕ್ಕೆ ನಿವೇಶನಕ್ಕಾಗಿ ಮುಖ್ಯಮಂತ್ರಿಗಳಾದಿಯಾಗಿ ಸಂಬಂಧಿಸಿದವರೆಲ್ಲರಿಗೂ ಅರ್ಜಿ ಹಾಕಿದರೂ ಇನ್ನೂ ತನಕ ಯಾರೂ ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಘವು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಅವರು ವಿನಂತಿಸಿಕೊಂಡರು.
ಶ್ರೀಮತಿ ಅನಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿದರು. ಸಂಘದ ಹಿರಿಯ ಸದಸ್ಯರಾದ ಶ್ರೀಮತಿ ರುದ್ರಿಬಾಯಿ ಮತ್ತು ಶ್ರೀಮತಿ ಸಣ್ಣಮ್ಮ ಬಿ. ಅವರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.