ವೈದ್ಯನನ್ನು ಅಪಹರಿಸಿ ಕೊಲೆ
ಸಂಜಯನಗರದ ಗೆದ್ದಲಹಳ್ಳಿಯ ಡಾ ಶರತ್ ಕುಮಾರ್(50) ಕೊಲೆಯಾದ ವೈದ್ಯ. ಬಿಡುಗಡೆ ಮಾಡುವುದಾಗಿ ಹೇಳಿದ ದುಷ್ಕರ್ಮಿಗಳು ಸುಮಾರು 15 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಪಡೆದುಕೊಂಡು ನಿರ್ದಯವಾಗಿ ಅವರನ್ನು ಕೊಲೆ ಮಾಡಿದ್ದಾರೆ. ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಗುಣಿ ಗ್ರಾಮದ ಕೆರೆಯ ಸಮೀಪ ಶರತ್ ಶವ ಪತ್ತೆಯಾಗಿದೆ.
ಮಕ್ಕಳ ತಜ್ಞರಾಗಿದ್ದ ಶರತ್ ಕುಮಾರ್ ಮನೆಯ ಕೆಳಮಹಡಿಯಲ್ಲೇ ಆದರ್ಶ ಕ್ಲಿನಿಕ್ ಎಂಬ ಆಸ್ಪತ್ರೆ ಇಟ್ಟುಕೊಂಡಿದ್ದರು. ದೊಡ್ಡ ವಾಣಿಜ್ಯ ಸಮುಚ್ಛಯ ನಿರ್ಮಿಸಿದ್ದ ಅವರು ಹಲವು ಮಳಿಗೆಗಳನ್ನು ಮೆಡಿಕಲ್ ಶಾಪ್, ಚಿನ್ನದ ಅಂಗಡಿಗಳಿಗೆ ಬಾಡಿಗೆ ನೀಡಿದ್ದರು. ಈ ವಾಣಿಜ್ಯ ಸಮುಚ್ಛಯದಲ್ಲಿ ಅವರ ಮನೆ ಮತ್ತು ಆಸ್ಪತ್ರೆ ಇತ್ತು.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಶರತ್ ಅವರ ಕ್ಲಿನಿಕ್ ಬಂದ ದುಷ್ಕರ್ಮಿಗಳು ಸಂಬಂಧಿಕರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಅಪರಿಚಿತರ ಮಾತು ನಂಬಿದ ವೈದ್ಯ ಶರತ್ ಕುಮಾರ್ ಅವರೊಂದಿಗೆ ಹೊರಟು ಹೋದರು. ನಂತರ ಅವರು ಸಿಕ್ಕಿದ್ದು ಕೊಲೆಯಾಗಿ, ಅಮೃತೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.