ಮೇ ಎರಡನೆ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ
ಮೌಲ್ಯಮಾಪನ ಭತ್ಯೆಯನ್ನು ರು.15ಕ್ಕೆ ಏರಿಸದಿದ್ದರೆ ಮೌಲ್ಯಮಾಪನವನ್ನು ಬಹಿಷ್ಕರಿಸುವುದಾಗಿ ಶಿಕ್ಷಕರು ಬೆದರಿಕೆಯೊಡ್ಡಿದ್ದಾರೆ. ಶಿಕ್ಷಕರ ಈ ಬೇಡಿಕೆಯನ್ನು ಸರಕಾರ ಈಡೇರಿಸುವ ಭರವಸೆಯನ್ನು ನೀಡಿದೆ. ಪರಿಸ್ಥಿತಿ ಹೀಗಿದ್ದರೂ ನಿಗದಿತ ಸಮಯದಲ್ಲಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವ ಭರವಸೆಯನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶುಕ್ರವಾರ ಪರಿಷ್ಕೃತ ಭತ್ಯೆಯನ್ನು ಪ್ರಕಟಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಶಿಕ್ಷಕರು ಮೌಲ್ಯಮಾಪನಕ್ಕೆ ಹಾಜರಾಗಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಾದ್ಯಂತ ಒಟ್ಟು 185 ಅವ್ಯಹಾರ ಪ್ರಕರಣಗಳು ಪತ್ತೆಯಾಗಿದ್ದವು. ಗಣಿತ ಪತ್ರಿಕೆಯ ಪರೀಕ್ಷೆಯಲ್ಲಿ ಒಟ್ಟು 39 ಅತಿಹೆಚ್ಚು ಅವ್ಯವಹಾರ ಪ್ರಕರಣಗಳು ಬಯಲಾಗಿದ್ದವು. ಎರಡನೆ ಅತಿಹೆಚ್ಚು ಅಂದರೆ 38ಅವ್ಯವಹಾರ ಪ್ರಕರಣಗಳು ವಿಜ್ಞಾನ ಪತ್ರಿಕೆಯ ದಿನ ಬಯಲಾಗಿದ್ದವು ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿಯ ಉತ್ತರ ಪತ್ರಿಕೆಗಳ ಗುಣಮಟ್ಟದ ಸರಿಯಿರಲಿಲ್ಲ ಎಂಬ ದೂರು ವಿದ್ಯಾರ್ಥಿಗಳಿಂದ ಕೇಳಿಬಂದಿತ್ತು. ಉತ್ತರ ಪತ್ರಿಕೆಯ ಗುಣಮಟ್ಟ ಸರಿಯಿಲ್ಲ ಎಂಬ ಒಂದೇ ಒಂದು ದೂರು ನಗರ ಪ್ರದೇಶದಿಂದ ಬಂದಿದೆ. ಆದರೆ ರಾಜ್ಯದ ಯಾವುದೇ ಕೇಂದ್ರದಿಂದಲೂ ಈ ಬಗ್ಗೆ ದೂರು ಬಂದಿಲ್ಲ ಎಂದು ಬೇಗ್ ಹೇಳಿದರು.
ಪರೀಕ್ಷಾ ಮಂಡಳಿಯ ನಿಯಮದಂತೆ ಉತ್ತರ ಪತ್ರಿಕೆಗಳ ದಪ್ಪ 65 ಜಿಎಸ್ ಎಂ ನಷ್ಟಿದೆ. ಐವತ್ತು ಲಕ್ಷ ಮುದ್ರಿತ ಉತ್ತರ ಪತ್ರಿಕೆಗಳ ಪೈಕಿ ಐದು ಪತ್ರಿಕೆಗಳ ಗುಣಮಟ್ಟ ಸರಿಯಿಲ್ಲದಿರುವ ಅವಕಾಶವಿದೆ, ಇದು ಸಾಮಾನ್ಯ ಅಂಶ. ಒಂದು ವೇಳೆ ಉತ್ತರ ಪತ್ರಿಕೆಗಳ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಮುದ್ರಕರಿಗೆ ದಂಡವಿಧಿಸುವುದಾಗಿ ಬೇಗ್ ತಿಳಿಸಿದರು.