ಕಗ್ಗಂಟಾಗಿರುವ ಬೆಂಗಳೂರು ಮೇಯರ್ ಆಯ್ಕೆ
ಗೆಲುವು ಸಾಧಿಸಿದ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಅನ್ನುವುದಕ್ಕಿಂತ ಯಾವ ನಾಯಕ ಬೆಂಬಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ವಿಷಯದಲ್ಲಿ ಪಕ್ಷದಲ್ಲಿಯೇ ಭಾರೀ ಭಿನ್ನಮತ ತಲೆದೋರಿದೆ. ಮೇಲ್ನೋಟಕ್ಕೆ ಬೆಂಗಳೂರು ಮೇಯರ್ ಆಯ್ಕೆಯ ಅಧಿಕಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಬಿಟ್ಟಿದ್ದು ಅಂತ ನಾಯಕರು ಹೇಳುತ್ತಿದ್ದರೂ ಒಳಗಿಂದೊಳಗೇ ಕೆಲವರು ಬುಸುಗುಡುತ್ತಿದ್ದಾರೆ.
ಮೇಯರ್ ಆಯ್ಕೆ ಇನ್ನೆರಡುಮೂರು ದಿನಗಳಲ್ಲಿ ನಡೆಯಲಿದೆ ಎಂದು ಅಬಕಾರಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇಂದು ಹೇಳಿಕೆ ನೀಡಿದ್ದರೆ, ಸಾರಿಗೆ ಸಚಿವ ಆರ್ ಅಶೋಕ್ ಮೇಯರ್ ಆಯ್ಕೆಗೆ ಇನ್ನೂ ಹದಿನೈದರಿಂದ ಇಪ್ಪತ್ತು ದಿನ ಬೇಕು ಅಂತ ಹೇಳಿ ಬೂದಿಯನ್ನು ಉದಿದ್ದಾರೆ. ಮೇಯರ್ ಆಯ್ಕೆ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರಿಗೆ ಬಿಟ್ಟಿದ್ದು ಅಂತ ಅಶೋಕ್ ಹೇಳಿ ಮತ್ತಷ್ಟು ಗೊಂದಲ ಸೃಷ್ಟಿಸಿದ್ದಾರೆ.
ಮೇಯರ್ ಹುದ್ದೆ ಈಬಾರಿ ಸಾಮಾನ್ಯ ವರ್ಗಕ್ಕೆ ಮೀಸಲು. ಉಪಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಮೇಯರ್ ಕುರ್ಚಿಗೆ ಸಾರಕ್ಕಿ ವಾರ್ಡ್ ನಿಂದ ಆಯ್ಕೆಯಾಗಿರುವ ಎಸ್ ಕೆ ನಟರಾಜ್ ಅವರ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ವಸಂತನಗರದಿಂದ ಜಯಶಾಲಿಯಾಗಿರುವ ತಮ್ಮ ಮಗ ಕಟ್ಟಾ ಜಗದೀಶ್ ನಾಯ್ಡು ಮೇಯರ್ ಸ್ಪರ್ಧೆಯಲ್ಲಿಲ್ಲ ಎಂದು ಹೇಳಿದ್ದರೂ, ಅವರೂ ಒಂದು ಕಣ್ಣಿಟ್ಟಿರುವುದು ಗುಟ್ಟಾಗೇನೂ ಉಳಿದಿಲ್ಲ. ಒಟ್ಟಿನಲ್ಲಿ ಬೆಂಗಳೂರು ಮೇಯರ್ ಆಯ್ಕೆ ಗೊಂದಲದ ಗೂಡಾಗಿ ಪರಿಣಮಿಸಿದೆ.