ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಂಡಲ್ ಲೈಟ್ ಡಿನ್ನರಿಗಾಗಿ ಯಡ್ಡಿಗೆ ಥ್ಯಾಂಕ್ಸ್

By * ಶಾಮ್
|
Google Oneindia Kannada News

BS Yeddyurappa
ಬೆಂಗಳೂರು, ಏ.8 : ನಾಲಕ್ಕು ದಿವಸಗಳ ಹಿಂದೆ. ಮಧ್ಯಾನ್ಹದ ಸಮಯ, ಸೋಮವಾರ ದಿನಾಂಕ 5. ಚುನಾವಣಾ ಫಲಿತಾಂಶಗಳನ್ನು ಬರೆಯುವುದರ ನಡುನಡುವೆ ನಮ್ಮ ಸುದ್ದಿ ಪುಟಗಳಲ್ಲಿ ಓತಪ್ರೋತವಾಗಿ ಹರಿದುಬರುವ ಕಾಮೆಂಟುಗಳನ್ನು ಸದನ ಕುತೂಹಲದಿಂದ ಓದುತ್ತಾ ಕುಳಿತಿದ್ದೆ. ನಮ್ಮ ಉಪಸಂಪಾದಕರು ನನ್ನ ಅಂಗಳಕ್ಕೆ ಧಾವಿಸಿ ಬಂದು ಮುಖ್ಯವಾದ ಒಂದು ಸುದ್ದಿಯ ಕಡೆಗೆ ನನ್ನ ಗಮನ ಸೆಳೆದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕದ ಜನತೆಗೆ ಶುಭ ಸಮಾಚಾರ ನೀಡಿದ್ದಾರೆಂದೂ ಅದನ್ನು ನಾವು ಬೇಗ ನಮ್ಮ ಓದುಗರಿಗೆ ತಲುಪಿಸಬೇಕೆನ್ನುವುದು ಅವರ ಸಲಹೆಯಾಗಿತ್ತು.

ಇಂಗ್ಲಿಷಿನಲ್ಲಿದ್ದ ಸುದ್ದಿ ಸಂಸ್ಥೆಯ ಆ ವರದಿಯನ್ನು ತರಿಸಿಕೊಂಡು ಓದಿದೆ. ಯಡಿಯೂರಪ್ಪನವರು ಸರಕಾರದ ವಿದ್ಯುತ್ ಸರಬರಾಜು ರೀತಿ/ನೀತಿಯ ಬಗೆಗೆ ಹೇಳಿಕೆ ಕೊಟ್ಟಿದ್ದರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯ ನಿತ್ಯೋತ್ಸವ ಆಗಲಿದೆ ಎನ್ನುವುದು ಆ ಹೇಳಿಕೆಯ ಸಾರಾಂಶವಾಗಿತ್ತು. ಓದಿ ನನಗೂ ಸಂತೋಷವಾಯಿತು. ಆದರೆ, ಅಯ್ಯೋ ಬಿಡು, ನಿಜನೋ ಸುಳ್ಳೋ, ನಾಳೆ ಬರೆದರಾಯಿತು ಎಂದುಕೊಂಡು ಬಿಬಿಎಂಪಿ ಫಲಿತಾಂಶಗಳನ್ನು ಟ್ವೀಟ್ ಮಾಡುತ್ತಾ ಕುಳಿತೆ.

ಅದೇ ಹೊತ್ತಿಗೆ ಬಿಬಿಎಂಪಿ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ಸಂತೋಷ ವ್ಯಕ್ತಪಡಿಸಲು ಭಾರತೀಯ ಜನತಾಪಕ್ಷದ ಕಾರ್ಯಕರ್ತರು ಊರು ತುಂಬಾ ಪಟಾಕಿ ಸಿಡಿಸುತ್ತಿದ್ದರು. ಪಟಾಕಿ ಹೊಗೆ ಆರುವ ಮುನ್ನವೇ ಬಿಎಸ್ ವೈ ಅವರು ಸುದ್ದಿಗಾರರನ್ನು (ಏಪ್ರಿಲ್ 5) ಭೇಟಿ ಮಾಡಿ ಬೆಂಗಳೂರಿನ ಮತದಾರರ ಮೂಲಕ ಕರ್ನಾಟಕದ ಜನಸ್ತೋಮಕ್ಕೆ ವಂದನೆ ಸಲ್ಲಿಸುತ್ತಿದ್ದರು. ಸುದ್ದಿ ಚಿತ್ರಗಳು ಸುವರ್ಣ ಟಿವಿ ಚಾನಲ್ಲಿನಲ್ಲಿ ಬರುತ್ತಿತ್ತು. ಯೆಡ್ಡಿ ಪ್ರಸನ್ನವದನರಾಗಿದ್ದರು. ಕೆನ್ನೆಗಳು ತಾವರೆಯ ಎಲೆಯಂತೆ ಸುಕೋಮಲವಾಗಿ ಕಾಣುತ್ತಿತ್ತು.

ತಮ್ಮನ್ನು ಸಂದರ್ಶಿಸಿದ ವಾಹಿನಿಯೊಂದಿಗೆ (ವೀಕ್ಷರೊಂದಿಗೆ) ಬಿಎಸ್ ವೈ ನಿರರ್ಗಳವಾಗಿ ಮಾತನಾಡಿದರು. ತಮ್ಮ ಅನಿಸಿಕೆಗಳ ಭಾಷಣದ ಕಾಪಿಗೆ ಅವರೇ ಒಂದು ಒಳ್ಳೆ ಹೆಡ್ಡಿಂಗ್ ಕೂಡ ಕೊಟ್ಟರು. ಆ ಶೀರ್ಷಿಕೆಯನ್ನು ನಾನು ನನ್ನ ಚುನಾವಣಾ ಫಲಿತಾಂಶ ವರದಿಗೆ ಬಳಸಬೇಕೆಂದಿದ್ದೆ. ಆದರೆ ತಡೆ ಹಿಡಿದೆ. ಏಕೆಂದರೆ ಸುವರ್ಣ ಚಾನಲ್ ಹೆಡ್ಡಿಂಗ್ ಅನ್ನು ದಟ್ಸ್ ಕನ್ನಡ ಕಾಪಿ ಮಾಡಿದೆ ಎಂದು ಕಾಮೆಂಟ್ ಅಂಗಳದಲ್ಲಿ ಪೆದ್ದ, ಗುಂಡ, ಸರ್ವಿಸ್ ತಿಮ್ಮ, true kannadiga, ಮುಂತಾದವರು ಬೊಬ್ಬೆ ಹಾಕುತ್ತಾರೆಂಬ ಭಯ.

ಯಡಿಯೂರಪ್ಪನವರು ಟಿವಿ ಸಂದರ್ಶನದಲ್ಲಿ ಮಾತನಾಡುತ್ತಾ ವಿದ್ಯುತ್ ಸರಬರಾಜು ವಿಷಯ ಪ್ರಸ್ತಾಪ ಮಾಡಿದರು. ಎರಡು ತಿಂಗಳು ಕರೆಂಟ್ ಕಟ್ ಮಾಡುವುದಿಲ್ಲ ಎನ್ನುವುದು ಅವರು ಕೊಟ್ಟ ಅಭಯ. ಬಿಬಿಎಂಪಿಯ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟ ಮತದಾರರಿಗೆ ಕೇವಲ ಥ್ಯಾಂಕ್ಸ್ ಹೇಳಿದರೆ ಪ್ರಯೋಜನವಿಲ್ಲ, ಪ್ರತಿಯಾಗಿ ಏನಾದರೂ ಉಡುಗೊರೆ ಕೊಡಬೇಕೆಂಬ ಸತ್ಯವನರಿತ ದೊರೆಯನ್ನು ಮನಸ್ಸಿನೊಳಗೇ ಅಭಿನಂದಿಸಿದೆ. ಆದರೆ ಸುದ್ದಿ ಮಾತ್ರ ಮಾರನೆ ದಿನ ಬರೆದೆ.(6 ಏಪ್ರಿಲ್) ಅದು ಹೀಗಿದೆ:

ಬೆಂಗಳೂರು, ಏ. 6 : ರಾಜಧಾನಿ ಬೆಂಗಳೂರು ಸೇರಿದಂತೆ ಮುಂದಿನ ಎರಡು ತಿಂಗಳು ಇಡೀ ರಾಜ್ಯಕ್ಕೆ ಅಗತ್ಯ ವಿದ್ಯುತ್ ಪೂರೈಸಲು ರಾಜ್ಯ ಸರಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸೋಮವಾರ ಬೆಂಗಳೂರು ಬಿಜೆಪಿಗೆ ಸುದಿನ. ಬಿಬಿಎಂಪಿ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ನಂತರ ತಮ್ಮ ಸಂತಸ ಹಂಚಿಕೊಂಡ ಯಡಿಯೂರಪ್ಪ, ಬೆಂಗಳೂರಿನ ಮೇಲೆ ಲೋಡ್ ಶೆಡ್ಡಿಂಗ್ ಹೇರುವುದಿಲ್ಲ ಎಂದು ಬಾಯಿಮಾತಿನ ಭರವಸೆ ಕೊಟ್ಟಿದ್ದಾರೆ.

ಗ್ರಾಮೀಣ ಭಾಗಕ್ಕೆ 12 ಗಂಟೆಗಳ ಕಾಲ ವಿದ್ಯುತ್ ನೀಡಲಿದ್ದು ಆರು ಗಂಟೆಗಳ ಕಾಲ ಮೂರು ಫೇಸ್ ಮತ್ತು ಆರು ಗಂಟೆಗಳ ಕಾಲ ಸಿಂಗಲ್ ಫೇಸ್ ವಿದ್ಯುತ್ ನೀಡುವುದಾಗಿಯೂ ಅವರು ಹೇಳಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುವುದು. ಈ ಸಂಬಂಧ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಮೂರು ಗಂಟೆಗಳ ಕಾಲ ಚರ್ಚೆ ನಡೆಸಿರುವುದಾಗಿ ಸಿಎಂ ಹೇಳಿಕೆ ನೀಡಿದ್ದಾರೆ.

***

ನಮ್ಮ ಕಚೇರಿ ಹೊಸೂರು ರಸ್ತೆಯಲ್ಲಿದೆ. ಪ್ರತಿದಿನ ಕರೆಂಟು ಕೈಕೊಡುವುದು ಪದ್ದತಿ. 7ನೇ ತಾರೀಕು 6 ಗಂಟೆ, 8ನೇ ತಾರೀಖು 6 ಗಂಟೆ. ಇವತ್ತು 9ನೇ ತಾರೀಖು ಇದುವರೆಗಿನ ವರದಿ ಪ್ರಕಾರ 5 ಗಂಟೆ ವಿದ್ಯುತ್ ಇಲ್ಲ. ಈ ರಸ್ತೆಯಲ್ಲಿರುವ ಎಲ್ಲ ಕಚೇರಿಗಳಲ್ಲಿ DGಗೆ ದಿನವಿಡೀ ಕೆಲಸ. ನಾನು ವಾಸಿಸುವುದು ಕೋಣನಕುಂಟೆಯಲ್ಲಿ. ಅಲ್ಲಿ ಏಪ್ರಿಲ್ 5ರ ಸಂಜೆಯಿಂದ ಪ್ರತಿದಿನ ಕರೆಂಟು ಹೋಗುತ್ತಿದೆ. ಸಂಜೆ 7ರಿಂದ 8.30 ಅಥವಾ 9ರವರೆಗೆ ಬಣ್ಣದ ಮೋಂಬತ್ತಿ. ಇದರಿಂದ ನನಗೆ ಪರೋಕ್ಷವಾಗಿ ಅನುಕೂಲವೇ ಆಗಿದೆ. ಕಣ್ಣುಗಳಿಗೆ ಕಂಪ್ಯೂಟರ್ ನಿಂದ ಕಡ್ಡಾಯ ರಕ್ಷಣೆ. ಛಾವಣಿ ಮೇಲೆ ಹೋಗಿ ಕುಳಿತರೆ ತಂಪಾದ ಹವೆ. ಪ್ರತಿರಾತ್ರಿ ಎರಡು ಗಂಟೆ ಆಕಾಶ ಸಮೀಕ್ಷೆ ಮಾಡುವ ಭಾಗ್ಯ. ನಿಜಕ್ಕೂ ನಾನು ಭಾಗ್ಯಶಾಲಿ.

Here by I pass on my sincere thanks to KPTCL officers for enriching my life with power cuts, which are, in fact, blessings in disguise as they have helped me rediscover myself sans the tech. Each of these evenings I am marrying laser technology in candle light. It wont come often. Thanks.

ಇತ್ತೀಚೆಗೆ ಬಂದ ಸುದ್ದಿ : ಗುಜರಾತ್ ನಿಂದ ವಿದ್ಯುತ್ ಖರೀದಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X