ಕರ್ನಾಟಕದಲ್ಲಿ ನಾಯಿಗೊಂದು ದೇವಸ್ಥಾನ
ಚನ್ನಪಟ್ಟಣ, ಏ. 9 : ಖ್ಯಾತಚಿತ್ರ ನಟಿ ಖುಷ್ಬೂ, ಎಂ.ಜಿ.ಆರ್. ದೇವಾಲಯ ಕಟ್ಟಿ ಅಭಿಮಾನಿಗಳು ಪಾವನರಾದರು, ಉತ್ತರಪ್ರದೇಶದಲ್ಲಿ ಮಾಯಾವತಿ ದೇವಾಲಯ ಕಟ್ಟಿ ಬೆಹನ್ಜೀಗೆ ದೀರ್ಘದಂಡ ನಮಸ್ಕಾರ ಹೊಡೆದು ಅಭಿಮಾನಿಗಳು ಧನ್ಯರಾಗಲು ಹೊರಟಿದ್ದಾರೆ. ಈ ಎಲ್ಲ ಅಪಸವ್ಯಗಳ ನಡುವೆ ನಿಯತ್ತಿನ ನಾಯಿಗೆ ಭಕ್ತಿಪೂರ್ವಕವಾಗಿ ದೇಗುಲ ಕಟ್ಟಿದ ಸಂಗತಿ ಎಲ್ಲಾದರೂ ಕೇಳಿದ್ದೀರಾ? ಇಲ್ಲಿದೆ ನೋಡಿ ಒಂದು ಅಪರೂಪದ ಸತ್ಯಕಥೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಏ.ವಿ ಹಳ್ಳಿಯಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ನಿಯತ್ತಿನ ನಾಯಿಗೆ ಒಂದು ದೇವಸ್ಥಾನ ಕಟ್ಟಿ ಪ್ರತಿನಿತ್ಯ ಅಗ್ರಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತಿಗಿಂತ ಹೆಚ್ಚಾಗಿ ಆತಂಕ ಬಂದಾಗ ಸ್ವಪ್ನದಲ್ಲೂ ಬಂದು ಎಚ್ಚರಿಸುತ್ತ ನಾಯಿದೊಳೆ ವೀರಪ್ಪ ಎಂದು ಕರೆಸಿಕೊಳ್ಳುವ ವೀರಪ್ಪ ಗ್ರಾಮವನ್ನು ಮತ್ತು ಗ್ರಾಮಸ್ಥರನ್ನು ಕಾಪಾಡುತ್ತಿದೆ ಎಂದು ಗ್ರಾಮಸ್ಥರು ನಂಬಿದ್ದಾರೆ.
ಭಕ್ತರ ಪಾಲಿಗೆ ಇಷ್ಟಾರ್ಥ ಸಿದ್ದಿಸುವ ನಾಯಿದೊಳೆ ವೀರಪ್ಪನೆಂದು ಕರೆಯಿಸಿಕೊಳ್ಳುವ ಶ್ವಾನದೇವ ಗ್ರಾಮದೇವತೆ ವೀರಮಾಸ್ತಿ ಕೆಂಪಮ್ಮನ ಬಂಟರೆಂಬ ನಂಬಿಕೆ ಇದೆ. ಆದ್ದರಿಂದಲೇ ಇಂದಿಗೂ ಗ್ರಾಮದ ಮನೆಯಲ್ಲಿ ಜನಿಸುವ ಹಿರಿಯಮಕ್ಕಳಿಗೆ ಶ್ವಾನದೇವನ ಹೆಸರನ್ನೇ ನಾಮಕರಣ ಮಾಡುವುದರ ಮೂಲಕ ಶ್ವಾನದೇವನ ಮೇಲಿನ ಭಕ್ತಿ ಎಷ್ಟೆಂಬುದನ್ನ ಗ್ರಾಮಸ್ಥರು ಸಾಬೀತು ಮಾಡಿದ್ದಾರೆ.
ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ತುತ್ತು ಅನ್ನ ಹಾಕಿದ ಋಣಕ್ಕೆ ಮಾಲೀಕನ ಹಿತ ಕಾಯುವ ಕಾಯಕ ಮಾಡುವ ಶ್ವಾನಗಳು ಒಂದು ರೀತಿ ಪ್ರೈವೇಟ್ ಸೆಕ್ಯುರಿಟಿ ಗಾರ್ಡ್ ಇದ್ದಂತೆ. ದೇವಾನುದೇವತೆಗಳು ಕೂಡ ಪುರಾಣದಲ್ಲೂ ಶ್ವಾನಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದ್ದರೆಂದು ಹೇಳಲಾಗುತ್ತದೆ. ಆದ್ದರಿಂದಲೇ ಶ್ವಾನ ಕೂಡ ನಾರಾಯಣಸ್ವರೂಪಿ ಎಂದು ಹೇಳುವ ವಾಡಿಕೆ ಇಂದಿಗೂ ಚಾಲ್ತಿಯಲ್ಲಿದೆ.
ಪುರಾಣ ಕಥೆ : ಗ್ರಾಮದ ಪೂರ್ವಿಕರು ಹಿಂದೆ ಕುರಿ ಮೇಕೆಗಳನ್ನ ಮೇಯಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಕುರಿ ಮೇಕೆಗಳು ಮಾಯವಾಗುತ್ತಿದ್ದವು. ಆಗ ಆತಂಕಗೊಂಡ ಗ್ರಾಮಸ್ಥರು ಗ್ರಾಮದೇವತೆ ವೀರಮಾಸ್ತಿ ಕೆಂಪಮ್ಮನ ಮೊರೆಹೋದಾಗ ನಾಯಿಗಳನ್ನು ಭಂಟರನ್ನಾಗಿಸಬೇಕೆಂದು ಗ್ರಾಮದೇವತೆ ಕೆಂಪಮ್ಮ ಹೇಳಿತು ಎಂಬ ನಂಬಿಕೆ ಇದೆ. ಆದ್ದರಿಂದ ವೀರಮಾಸ್ತಿ ಕೆಂಪಮ್ಮನ ದೇವಾಲಯದ ಸಮೀಪವೇ ಶ್ವಾನ ದೇವಾಲಯ ನಿರ್ಮಾಣ ಮಾಡಿ ನಾಯಿದೊಳೆ ವೀರಪ್ಪ ಎಂದು ನಾಮಕರಣ ಮಾಡಿ ಕೆಂಪಮ್ಮನಿಗೆ ಪೂಜೆ ಸಲ್ಲಿಸುವ ಮೊದಲು ಶ್ವಾನಕ್ಕೆ ಅಗ್ರ ಪೂಜೆಯನ್ನ ಭಕ್ತಿ ಭಾವದಿಂದ ಸಲ್ಲಿಸುತ್ತಿದ್ದಾರೆ.
ಮಕ್ಕಳಿಗೂ ನಾಮಕರಣ : ನಾಯಿದೊಳೆ ವೀರಪ್ಪ ಮತ್ತು ವೀರಮಾಸ್ತಿ ಕೆಂಪಮ್ಮನನ್ನು ಮನೆದೇವರನ್ನಾಗಿಸಿಕೊಂಡು ಪೂಜಿಸುವ ನೂರಾರು ಕುಟುಂಬಗಳಿವೆ. ಈ ದೇವರ ವಂಶದ ಭಕ್ತರ ಕುಟುಂಬದಲ್ಲಿ ಜೇಷ್ಠ ಪುತ್ರ ಪುತ್ರಿಯರು ಜನಿಸಿದರೆ ಶ್ವಾನದೇವ ನಾಯಿದೊಳೆ ವೀರಪ್ಪನ ಹೆಸರನ್ನು ನಾಮಕರಣ ಮಾಡುತ್ತಾರೆ. ಮಗು ಗಂಡಾದರೆ ವೀರಪ್ಪ, ಹೆಣ್ಣಾದರೆ ವೀರಮ್ಮ ಎಂದು ನಾಮಕರಣ ಮಾಡುವ ಪದ್ದತಿ ಇಂದಿಗೂ ನಡೆಸಿಕೊಂಡು ಬರುತ್ತಿದ್ದೇವೆಂದು ಗ್ರಾಮದ ಮುಖಂಡ ರಾಜಣ್ಣ ಹೇಳುತ್ತಾರೆ. ಗ್ರಾಮದಲ್ಲಿ ಇಂದಿಗೂ ವೀರೇಗೌಡ, ವೀರಪ್ಪ, ವೀರಮ್ಮ ಹೆಸರಿನ ಹಲವಾರು ಮಂದಿ ಇದ್ದಾರೆ.
ಎಚ್ಚರಿಕೆ ಘಂಟೆ : ವೀರಮಾಸ್ತಿ ಕೆಂಪಮ್ಮನ ಭಂಟರಾಗಿರುವ ಶ್ವಾನಗಳಿಗೆ ಗುಡಿ ಗೋಪುರ ನಿರ್ಮಾಣ ಮಾಡಿ ನಿತ್ಯ ಅಗ್ರ ಪೂಜೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವ ಮುನ್ಸೂಚನೆ ಇದ್ದರೆ ಗ್ರಾಮದೇವತೆ ವೀರಮಾಸ್ತಿ ಕೆಂಪಮ್ಮ ತನ್ನ ಭಂಟರಾದ ಶ್ವಾನಗಳ ರೂಪದಲ್ಲಿ ಬಂದು ಗ್ರಾಮಸ್ಥರಿಗೆ ಸೂಕ್ಷ್ಮವನ್ನ ನೀಡುತ್ತಾಳೆಂಬುದು ಗಾಮಸ್ಥರ ನಂಬಿಕೆಯಾಗಿದೆ.
ವೀರಮಾಸ್ತಿ ಕೆಂಪಮ್ಮ ಮತ್ತು ನಾಯಿದೊಳೆ ವೀರಪ್ಪನ ದೇವಾಲಯ ನಿರ್ಮಾಣ ಮಾಡುವ ಸಂದರ್ಭದಲ್ಲೂ ಹಲವು ಅಚ್ಚರಿಯ ಘಟನೆಗಳು ನಡೆದಿರುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿಯವರೆಗೂ ವೀರಮಾಸ್ತಿ ಕೆಂಪಮ್ಮ ನಾಯಿದೊಳೆ ವೀರಪ್ಪನ ಅನುಗ್ರಹದಿಂದ ಗ್ರಾಮದಲ್ಲಿ ಕಳ್ಳತನದಂತಹ ಘಟನೆಗಳು ನಡೆದಿಲ್ಲ. ನಾಯಿದೊಳೆ ವೀರಪ್ಪನ ಮೇಲಿರುವ ಭಯದಿಂದಾಗಿ ಜನರೂ ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂಬುದು ಗ್ರಾಮದ ಹಿರಿಯ ಸಿದ್ದೇಗೌಡರ ಅಭಿಪ್ರಾಯ.
ಶ್ವಾನದ ಮೊರೆ : ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಮಸ್ಯೆ ಎದುರಾದಾಗ ಮತ್ತು ಇಷ್ಟಾರ್ಥ ಸಿದ್ದಿಗಾಗಿ ಮೊದಲು ನಾಯಿದೊಳೆ ವೀರಪ್ಪನಿಗೆ ಭಕ್ತರು ಹರಕೆ ಹೊರುತ್ತಾರೆ. ಸುತ್ತಮುತ್ತಲ ಗ್ರಾಮಗಳಲ್ಲಿ ಜಾನುವಾರುಗಳ ಆರೋಗ್ಯದಲ್ಲಿ ಸಮಸ್ಯೆ ಎದುರಾದರೂ ಕೂಡ ನಾಯಿದೊಳೆ ವೀರಪ್ಪನಿಗೆ ಪೂಜೆ ಸಲ್ಲಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.
ಶ್ವಾನಗಳನ್ನ ಪ್ರೀತಿಯಿಂದ ಸಾಕಿ ಸಲುಹಿ ಮನೆಮಂದಿಯಂತೆ ಶ್ವಾನಕ್ಕೂ ಸ್ಥಾನ ನೀಡಿ ಉಪಚಾರ ಮಾಡುವ ಮಂದಿ ಹಲವರಿದ್ದಾರೆ. ಜೀವಂತ ಶ್ವಾನಗಳಿಗೆ ಎಸಿ ರೂಂನಲ್ಲಿರಿಸುವ ಮಂದಿಯೂ ಇದ್ದಾರೆ. ಆದರೆ ಏ.ವಿ ಹಳ್ಳಿಯ ಗ್ರಾಮಸ್ಥರು ಗ್ರಾಮದ ಆರಾಧ್ಯದೈವವೆನಿಸಿರುವ ನಾಯಿದೊಳೆವೀರಪ್ಪನಿಗೆ ನಿತ್ಯ ಪೂಜೆ ಸಲ್ಲಿಸುವ ಮೂಲಕ ನಿಯತ್ತಿನ ಪ್ರಾಣಿ ಶ್ವಾನದ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ದಲಿತ ವ್ಯಕ್ತಿಯೇ ಅರ್ಚಕ : ಇವೆಲ್ಲದರ ನಡುವೆ ಒಕ್ಕಲಿಗ ಜನಾಂಗವೇ ಹೆಚ್ಚು ವಾಸಿಸುವ ಈ ಗ್ರಾಮದಲ್ಲಿ ವೀರಮಾಸ್ತಿ ಕೆಂಪಮ್ಮನ ಸನ್ನಿಧಿಯಲ್ಲಿರುವ ನಾಯಿದೊಳೆ ವೀರಪ್ಪನಿಗೆ ದಲಿತ ವ್ಯಕ್ತಿಯಿಂದಲೇ ಅಗ್ರ ಪೂಜೆ ಸಲ್ಲುತ್ತಿದೆ. ಸಾಮಾನ್ಯವಾಗಿ ವೇದ ಮಂತ್ರ ಕಲಿತು ದೇವರ ಸನ್ನಿಧಿಯಲ್ಲಿ ಮಂತ್ರ ಪಠಿಸುವ ಅರ್ಚಕರ ನಡುವೆ ಶ್ರದ್ಧಾಭಕ್ತಿಯಿಂದ ನಾಯಿದೊಳೆ ವೀರಪ್ಪನಿಗೆ ಪೂಜೆ ಮಾಡುತ್ತಿರುವ ದಲಿತ ಜನಾಂಗದ ಅರ್ಚಕ ಕೂಡ ಗ್ರಾಮಸ್ಥರ ಸಹಕಾರದ ಬಗ್ಗೆ ಕೃತಜ್ಞತೆ ತಿಳಿಸುತ್ತಾರೆ. ಆದ್ದರಿಂದ ನಾಯಿದೊಳೆ ವೀರಪ್ಪನ ಸನ್ನಿಧಿಯಲ್ಲಿ ಜಾತಿ ಧರ್ಮದ ಸಂಕೋಲೆಯನ್ನ ತೊಡೆದುಹಾಕಿ ಗ್ರಾಮಸ್ಥರೆಲ್ಲರೂ ಭಾವೈಕ್ಯತೆ ಮಂತ್ರ ಪಠಿಸುತ್ತಿದ್ದಾರೆ.