ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಹೃದ್ರೋಗ ಆಸ್ಪತ್ರೆ
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಜಯದೇವ ಹೃದ್ರೋಗ ಘಟಕವನ್ನು ಜೂನ್ ತಿಂಗಳಲ್ಲಿ ನಾಡಿಗೆ ಸಮರ್ಪಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ನುಡಿದರು. ಚಿಕಿತ್ಸೆಗಾಗಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ರೋಗಿಗಳಿಗೆ ಮೈಸೂರಿನ ಜಯದೇವ ಆಸ್ಪತ್ರೆಯ ಘಟಕದ ಸ್ಥಾಪನೆ ವರದಾನವಾಗಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ದೇಶ ಮತ್ತು ವಿದೇಶದಿಂದಲೂ ಜಯದೇವ ಆಸ್ಪತ್ರೆಗೆ ಹೃದ್ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆಸ್ಪತ್ರೆಯ ನಿರ್ದೇಶಕ ಪದ್ಮಶ್ರೀ ಡಾ.ಸಿಎನ್ ಮಂಜುನಾಥ್ ಅವರ ನಿಸ್ಪೃಹ ಸೇವೆಯಿಂದ ಜಯದೇವ ಆಸ್ಪತ್ರೆಗೆ ಪ್ರಶಂಸೆಗೆ ಪಾತ್ರವಾಗಿದೆ ಎಂದ ಅವರು ಆಸ್ಪತ್ರೆಗೆ ಬೇಕಿರುವ ಎಲ್ಲ ನೆರವನ್ನು ನೀಡುವುದಾಗಿ ವಾಗ್ದಾನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್ ಅವರು, ನೂತನ ಆಡಿಟೋರಿಯಂ ಅನ್ನು ಒಂದೂವರೆ ಕೋಟಿ ರು. ವೆಚ್ಚದಲ್ಲಿ ಮತ್ತು ಕ್ಯಾತ್ ಲ್ಯಾಬನ್ನು ಮೂರು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೆಆರ್ ಆಸ್ಪತ್ರೆಯಲ್ಲಿನ ಹೃದ್ರೋಗ ಘಟಕವನ್ನು ಐದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ವಿವರ ನೀಡಿದರು.
ಶಿವಮೊಗ್ಗದಲ್ಲಿ ಕೂಡ ಜಯದೇವ ಹೃದ್ರೋಗ ಘಟಕವನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ಹೃದ್ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಅನುಕೂಲವಾಗಲೆಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೃದ್ರೋಗ ಘಟಕ ಸ್ಥಾಪಿಸಲಾಗುವುದು ಎಂದು ಮಂಜುನಾಥ್ ನುಡಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ, ಬೆಂಗಳೂರು ಜಲಮಂಡಲಿ ಹಾಗೂ ಅಬಕಾರಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.