ಬಿಬಿಎಂಪಿ ಮೊದಲ ಮೇಯರ್ ನಟರಾಜ್?
ಮಂಗಳವಾರ ಸಾರಿಗೆ ಸಚಿವ ಆರ್ ಅಶೋಕ್ ಅವರ ನಿವಾಸದಲ್ಲಿ ಹೊಸದಾಗಿ ಆಯ್ಕೆಯಾದ ಕಾರ್ಪೊರೇಟರ್ ಗಳು ಸಭೆ ಸೇರಿ ಮುಂದಿನ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಟರಾಜ್ ಅವರ ಬಗ್ಗೆ ಹೆಚ್ಚಿನವರು ಒಲವು ತೋರಿದರು ಎನ್ನಲಾಗಿದೆ. ಉಪ ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಕಾರ್ಪೊರೇಟರ್ ಆಯ್ಕೆ ಮಾಡುವ ತಯಾರಿಯಲ್ಲಿರುವ ಬಿಜೆಪಿ ಮುಖಂಡರು, ಸಿವಿ ರಾಮನ್ ನಗರ ವಿಧಾನ ಸಭಾ ಕ್ಷೇತ್ರದ ವಾರ್ಡ್ ನತ್ತ ಮುಖ ಮಾಡಿದ್ದಾರೆ. ಸಿವಿ ರಾಮನ್ ನಗರದ 7 ವಾರ್ಡ್ ಗಳಲ್ಲಿ ಬಿಜೆಪಿ ಜಯ ಸಾಧಿಸಿದ್ದು, ಈ ಪೈಕಿ ಮೂವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ಒಬ್ಬರನ್ನು ಉಪ ಮೇಯರ್ ಮಾಡುವ ಸಾಧ್ಯತೆ ನಿಚ್ಚಳವಾಗಿದೆ.
ಆಡಳಿತ ಪಕ್ಷದ ನಾಯಕತ್ವಕ್ಕೂ ರೇಸ್ ಶುರುವಾಗಿದ್ದು ಗಂಗ ಭೈರಯ್ಯ, ಕಟ್ಟೆ ಸತ್ಯನಾರಾಯಣ, ವೆಂಕಟೇಶ ಮೂರ್ತಿ, ಬಿ ಆರ್ ನಂಜುಡಪ್ಪ ಇವರುಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಇನ್ನೊಂದು ವಾರದೊಳಗೆ ಎಲ್ಲಾ ಆಯ್ಕೆ ಪ್ರಕ್ರಿಯೆಯನ್ನು ಪೂರೈಸುವುದಾಗಿ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ.
ನಟರಾಜ್ ಆಯ್ಕೆ ಯಾಕೆ?: ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಹರಡಿರುವ ರೆಡ್ದಿ-ಒಕ್ಕಲಿಗ ಸಮುದಾಯದ ಮನ ಗೆಲ್ಲಲು ನಟರಾಜ್ ಅವರನ್ನು ಆರಿಸಿರುವ ಸಾಧ್ಯತೆಯಿದೆ. ಬಸವನಗುಡಿಯ ಕಟ್ಟೆ ಸತ್ಯನಾರಾಯಣ ಕೂಡ ಮೇಯರ್ ಆಕಾಂಕ್ಷಿಯಾಗಿದ್ದು, ಇವರೀರ್ವರ ಮಧ್ಯೆ ಭಾರಿ ಪೈಪೋಟಿ ಇತ್ತು ಎನ್ನಲಾಗಿದೆ. ಆದರೆ, ಕೊನೆ ಗಳಿಗೆಯಲ್ಲಿ ಆರ್ ಅಶೋಕ್ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹೆಚ್ ಎನ್ ಅನಂತ್ ಕುಮಾರ್ ಅವರ ಬೆಂಬಲಿಗರಾದ ನಟರಾಜ್ ಗೆ ಅದೃಷ್ಟ ಒಲಿದಿದೆ.