ಪೊಲೀಸ್ ಇಲಾಖೆ ಸಂಪೂರ್ಣ ಗಣಕೀಕರಣ
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೊಲೀಸ್ ಇಲಾಖೆಯ ಸಂಪೂರ್ಣ ಗಣಕೀಕರಣಕ್ಕೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ತರಬೇತಿ ಕೇಂದ್ರ ತೆರೆಯುವ ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಸರ್ಕಾರಿ ಇಲಾಖೆಗಳು ಇದರ ಸದುಪಯೋಗ ಪಡೆದುಕೊಂಡು ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸುವುದು ಇಂದಿನ ಅಗತ್ಯ. ಇದರಿಂದ ಹೆಚ್ಚುತ್ತಿರುವ ಜನರ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪೊಲೀಸ್ ಇಲಾಖೆಯಲ್ಲಿ ಮಾಹಿತಿ ಸಂತ್ರಜ್ಞಾನ ಅಳವಡಿಸಿರುವುದರಿಂದ ಮಾಹಿತಿಯ ಸುಲಭ ಲಭ್ಯತೆ, ಪರಿಣಾಮಕಾರಿ ಸಂವಹನ, ಕಾರ್ಯದಕ್ಷತೆ ಹೆಚ್ಚುವುದಲ್ಲದೆ, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿವರಿಸಿದ ಅವರು ಅತ್ಯುತ್ತಮ ಸಂವಹನ ಜಾಲದ ಮೂಲಕ ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಂವಹನ ಸಾಧಿಸುವುದು ಇಂದಿನ ಸವಾಲು. ನಕ್ಸಲ್ ಸಮಸ್ಯೆ, ಭಯೋತ್ಪಾದನೆಯಂತಹ ಕ್ಲಿಷ್ಟ ಸವಾಲುಗಳನ್ನು ಎದುರಿಸಲು ಮಾಹಿತಿ ತಂತ್ರಜ್ಞಾನವು ಪೊಲೀಸ್ ಇಲಾಖೆಗೆ ನೆರವು ನೀಡಲಿದೆ ಎಂದು ಅವರು ತಿಳಿಸಿದರು.
ಈ ತಂತ್ರಾಂಶವು ಪೊಲೀಸ್ ಇಲಾಖೆಯ ಎಲ್ಲಾ ಅಗತ್ಯಗಳಿಗೆ ಉತ್ತರವಾಗಿದ್ದು, ಇಲಾಖೆಯನ್ನು ಕಾಗದರಹಿತ ಇಲಾಖೆಯಾಗಿಸುವತ್ತ ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಅವರು ನುಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ವಿಪ್ರೊ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಆನಂದ್ ಶಂಕರನ್ ಅವರು ಮಾತನಾಡಿ, ಈ ಯೋಜನೆಯು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ವಿವರಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಡಾ. ಅಜಯ್ಕುಮಾರ್ ಸಿಂಗ್ ಅವರು ಸ್ವಾಗತಿಸಿದರು. ಎಡಿಜಿಪಿ-ಆಡಳಿತ ನೀಲಂ ಅಚ್ಯುತ ರಾವ್ ಅವರು ವಂದಿಸಿದರು.ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಭಿಜಿತ್ ದಾಸ್ಗುಪ್ತಾ, ಹೋಮ್ಗಾರ್ಡ್ಸ್ ಮತ್ತು ಅಗ್ನಿಶಾಮಕ ಇಲಾಖೆಯ ಡಿಜಿಪಿ ಜೀಜಾ ಮಾಧವನ್ ಹರಿಸಿಂಗ್, ಸಿಐಡಿ ಡಿಜಿಪಿ ಡಾ. ಡಿ.ವಿ. ಗುರುಪ್ರಸಾದ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.