ಎಸ್ಸೆಸ್ ಮಲ್ಲಿಕಾರ್ಜುನ ಕೆಪಿಸಿಸಿ ಅಧ್ಯಕ್ಷ..?
ಕಾಂಗ್ರೆಸ್ ನಲ್ಲಿ ಲಿಂಗಾಯಿತರಿಗೆ ಪ್ರಾತಿನಿಧ್ಯ ಕೊರತೆ ಎದ್ದು ಕಾಣುತ್ತಿದ್ದು, ಯಡಿಯೂರಪ್ಪ ಸರಕಾರಕ್ಕೆ ಸೆಡ್ಡು ಹೊಡೆಯಲು ಲಿಂಗಾಯಿತ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಲು ಹೈಕಮಾಂಡ್ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ರಾಜಶೇಖರಮೂರ್ತಿ ಹೆಸರು ಬಲವಾಗಿ ಕೇಳಿ ಬರುತ್ತಿವೆ. ಇದರ ಜೊತೆಗೆ ಮಾಜಿ ಸಚಿವ ಜಿ ಪರಮೇಶ್ವರ ಅವರ ಹೆಸರೂ ಸೇರಿಕೊಂಡಿದೆ.
ಲೋಕಸಭೆ, ವಿಧಾನಸಭೆ ಚುನಾವಣೆಯ ನಂತರ ಪಕ್ಷ ಸಂಘಟಿಸಲು ಕೆಲವು ಅವಕಾಶಗಳನ್ನು ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ನೀಡಿತ್ತಾದರೂ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರನ್ನು ಮುನ್ನೆಡೆಸುವಲ್ಲಿ ರಾಜ್ಯ ನಾಯಕರು ವಿಫಲರಾಗಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ. ಇದರಿಂದಾಗಿ ರಾಜ್ಯ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಪರಿಶೀಲನೆ ನಡೆಸಿದೆ.
ಗ್ರಾಮಪಂಚಾಯಿತಿ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ಮಾಡದಿದ್ದರೆ ಮತ್ತೆ ಮುಖಭಂಗ ಕಟ್ಟಿಟ್ಟ ಬುತ್ತಿ. ಈಗಾಗಲೇ ಸೋತು ಸುಣ್ಣವಾಗಿರುವ ಪಕ್ಷ ಮತ್ತಷ್ಟು ನೆಲ ಕಚ್ಚುವುದರಲ್ಲಿ ಸಂಶಯವಿಲ್ಲ ಎಂಬ ಅಂಶವನ್ನು ಮನಗಂಡಿರುವ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನು ಬದಲಾವಣೆ ಮಾಡಲು ಮುಂದಾಗಿದ್ದಾರೆ.