ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿಸಿ ಪ್ರತಿಭಟನೆ
ತಾಲ್ಲೂಕಿನ ಹನುಮಂತಪುರ ಮತ್ತು ಜಂಬರಘಟ್ಟ ಸರ್ವೆ ನಂ.97, 103ರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಹಿರಿಯ ಭೂವಿಜ್ಞಾನ ಮತ್ತು ಗಣಿ ಇಲಾಖೆ ಅನುಮತಿ ರದ್ದುಪಡಿಸಿದ್ದರೂ ಸಹ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಹಳ್ಳಿಗಳಿಗೆ ಬಹಳ ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಂಬ್ ಸ್ಫೋಟ ಮಾಡುವುದರಿಂದ ಸುತ್ತಮುತ್ತಲಿನ ಮನೆಗಳು ಬಿರುಕು ಬಿಡುತ್ತಿವೆ. ಅಂತರ್ಜಲ ಬರಡಾಗುತ್ತಿದೆ. ಪರಿಸರ ಮಾಲಿನ್ಯ ಉಂಟಾಗಿದೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗಿದ್ದು, ಈ ವ್ಯಾಪ್ತಿಯಲ್ಲಿ ಇರುವುದೊಂದೇ ಅರಣ್ಯ ಪ್ರದೇಶವಾಗಿದ್ದು, ಅದೂ ಕೂಡ ಅಕ್ರಮ ಕಲ್ಲು ಗಣಿಗಾರಿಕೆಯಿಂದ ನಶಿಸಿ ಹೋಗುತ್ತಿದೆ. ಇಲ್ಲಿನ ರೈತಾಪಿ ಜನರ ಹೊಲ ಮತ್ತು ತೋಟ, ಬೆಳೆಗಳೂ ಕೂಡ ನಾಶವಾಗುತ್ತಿದೆ. ಗಣಿಗಾರಿಕೆಯಿಂದ ಸುತ್ತಮುತ್ತಲಿನ ವಾತಾವರಣ ಹದಗೆಟ್ಟಿದ್ದು, ಗ್ರಾಮಸ್ಥರು ವಲಸೆ ಹೋಗುವ ಸಂದರ್ಭ ಒದಗಿ ಬಂದಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಯುವ ಕಾಂಗ್ರೆಸ್ ವತಿಯಿಂದ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಪಟೇಲ್ ವಹಿಸಿದ್ದರೆ, ಮಾಜಿ ,ಅಧ್ಯಕ್ಷ ಎಸ್.ರವಿಕುಮಾರ್, ಬ್ಲಾಕ್ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಸೀತಾರಾಮ್, ಮಲ್ಲಿಕಾರ್ಜುನ್, ಶರತ್, ಮಧು, ಗೋಪಾಲ್, ಮಂಜು ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಪಾಲ್ಗೊಂಡಿದ್ದರು.