ಚಲನಚಿತ್ರ ಪ್ರಶಸ್ತಿ ಸಮಾರಂಭಕ್ಕೆ ಶಿವಮೊಗ್ಗ ಸಿಂಗಾರ
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಪ್ರದಾನ ಸಮಾರಂಭವು ರಾಜ್ಯಮಟ್ಟದ ಕಾರ್ಯಕ್ರಮವಾಗಿದ್ದು, ಸುಮಾರು 20ರಿಂದ 25 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, 10 ಸಾವಿರ ಕುರ್ಚಿ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ, 10 ಕಡೆ ದೊಡ್ಡದಾದ ಪ್ರೊಜೆಕ್ಟರ್ ಸ್ಕ್ರೀನ್ ಅಳವಡಿಕೆಯನ್ನು ಮಾಡಲಾಗುವುದು ಎಂದರು.
ವಾಹನಗಳ ನಿಲುಗಡೆಗೆ ಬೇರೆ ಬೇರೆ ಜಾಗಗಳನ್ನು ಗುರುತಿಸಲಾಗಿದ್ದು, ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಈಗಾಗಲೇ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ಜಿಲ್ಲಾ ರಕ್ಷಣಾಧಿಕಾರಿಗಳಲ್ಲಿ ಚರ್ಚಿಸಲಾಗಿದೆ. ಕಾರ್ಯಕ್ರಮ ಮುಗಿದ ನಂತರ ಜನರು ಹಿಂತಿರುಗಲು ಖಾಸಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಆರ್ಟಿಓ ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಇನ್ನಿತರ ಎಲ್ಲಾ ವ್ಯವಸ್ಥೆಯ ಜೊತೆಗೆ ಸೂಕ್ತ ರಕ್ಷಣೆ ಒದಗಿಸುವ ಸಲುವಾಗಿ ದಾವಣಗೆರೆ, ಹಾವೇರಿಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಲಾಗಿದೆ ಎಂದರು.
ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ರವಿಕುಮಾರ್ ಮಾತನಾಡಿ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 28 ಪ್ರಶಸ್ತಿಗಳನ್ನು ವಿತರಿಸಲಾಗುವುದು. ಇದರಲ್ಲಿ ಡಾ|ರಾಜ್ಕುಮಾರ್ ಪ್ರಶಸ್ತಿಯನ್ನು ಡಾ|ವಿಷ್ಣುವರ್ಧನ್ರವರಿಗೆ ಮರಣೋತ್ತರವಾಗಿ ನೀಡಲಾಗುವುದು. ಪುಟ್ಟಣ್ಣ ಕಣಗಲ್ ಪ್ರಶಸ್ತಿಯನ್ನು ರೇಣುಕಾ ಶರ್ಮಾರವರಿಗೆ, ಜೀವಮಾನ ಶ್ರೇಷ್ಠ ಸಾಧನೆಗಾಗಿ ಪಾರ್ವತಮ್ಮ ರಾಜ್ಕುಮಾರ್ರವರಿಗೆ, ಅತ್ಯುತ್ತಮ ಚಿತ್ರ ಗುಲಾಬಿ ಟಾಕೀಸ್ಗೆ, ಅತ್ಯುತ್ತಮ ಮಕ್ಕಳ ಚಿತ್ರ ಏಕಲವ್ಯಕ್ಕೆ ಹಾಗೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪುನೀತ್ ರಾಜ್ಕುಮಾರ್ಗೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಉಮಾಶ್ರೀಗೆ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ರಾಜೇಶ್ರವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದು, ಚಿತ್ರತಾರೆಯರಾದ ವಿಜಯ ರಾಘವೇಂದ್ರ, ಪುನೀತ್ ರಾಜ್ಕುಮಾರ್, ದಿಗಂತ್, ಯೋಗೀಶ್, ಸುದೀಪ್, ನೀತು, ಯಜ್ಞಾ ಶೆಟ್ಟಿ, ಭಾವನಾ ಇನ್ನು ಮುಂತಾದ ಕಲಾವಿದರು ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಲಿರುವರು. ಹಾಗೆಯೇ, ಸ್ಥಳೀಯ 200 ಜನ ಕಲಾವಿದರು ನಾಡಗೀತೆ ಹಾಡಲಿರುವರು ಎಂದರು. ಸುದ್ದಿಗೋಷ್ಠಿಯಲ್ಲಿ ವಾರ್ತಾಧಿಕಾರಿ ದೇವರಾಜಯ್ಯ ಉಪಸ್ಥಿತರಿದ್ದರು.
ಏ.4ರಿಂದ ಮನಶಾಸ್ತ್ರ ಕುರಿತ ಚಲನಚಿತ್ರೋತ್ಸವ