ಏ.4ರಿಂದ ಮನಶಾಸ್ತ್ರ ಕುರಿತ ಚಲನಚಿತ್ರೋತ್ಸವ
ಇದೇ ಮೊದಲ ಬಾರಿಗೆ ಬೆಳ್ಳಿಮಂಡಲದ ವತಿಯಿಂದ ಮನಸ್ಸು ಮಾಧ್ಯಮ ಕುರಿತಾದ 7 ದಿನಗಳ ಚಲನಚಿತ್ರೋತ್ಸವವನ್ನು ವಾರ್ತಾ ಇಲಾಖೆ, ಜಿಲ್ಲಾಡಳಿತ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗಳ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದ್ದು, ಚಿತ್ರೋತ್ಸವವನ್ನು ಏ.4ರಂದು ಬೆಳಿಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಸರಾಂತ ಚಿತ್ರ ನಿರ್ದೇಶಕರಾದ ಡಾ|ಗಿರೀಶ್ ಕಾಸರವಳ್ಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕಲಾವಿದೆಯರಾದ ಉಮಾಶ್ರೀ, ತಾರಾ, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ, ನಟ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಶಾಸಕ ಹಾಗೂ ಬೆಳ್ಳಿಮಂಡಲದ ಮಹಾ ಪೋಷಕರಾದ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ.
ಚಿತ್ರೋತ್ಸವದ ಮೊದಲ ಚಿತ್ರವಾಗಿ ಅಮೀರ್ ಖಾನ್ ನಿರ್ದೇಶನದ ತಾರೇ ಜಮೀನ್ ಪರ್ ಚಿತ್ರ ಪ್ರದರ್ಶನಗೊಳ್ಳಲಿದ್ದು, ಉಳಿದಂತೆ, ಏ.5ರಂದು ಕುವೆಂಪು ರಂಗಮಂದಿರದಲ್ಲಿ ಕಾಡಿನ ಬೆಂಕಿ (ಕನ್ನಡ), ಏ.6ರಂದು ಶಂಕರಘಟ್ಟದ ಕುವೆಂಪು ವಿವಿಯಲ್ಲಿ ದೇವರಾಯಿ (ಮರಾಠಿ), ಏ.7ರಂದು ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬ್ಯೂಟಿಫುಲ್ ಮೈಂಡ್ (ಇಂಗ್ಲೀಷ್), ಏ.8ರಂದು ಕಮಲಾ ನೆಹರು ಕಾಲೇಜಿನಲ್ಲಿ ಪ್ರಥಮ ಉಷಾಕಿರಣ (ಕನ್ನಡ), ಏ.9ರಂದು ಕುವೆಂಪು ರಂಗಮಂದಿರದಲ್ಲಿ ಪಾ (ಹಿಂದಿ), ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನಲ್ಲಿ ಮಾನಸ ಸರೋವರ (ಕನ್ನಡ), ಏ.10ರಂದು ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒನ್ ಹೂ ಫ್ಲೂ ಓವರ್ ಕುಕುನ್ಸೆಸ್ಟ್ (ಇಂಗ್ಲೀಷ್), ಪೆಸೆಟ್ ಕಾಲೇಜಿನಲ್ಲಿ 15 ಪಾರ್ಕ್ ಅವೆನ್ಯೂ (ಹಿಂದಿ) ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಎಲ್ಲ ಚಿತ್ರಗಳ ಪ್ರದರ್ಶನ ಸಮಯ ಬೆಳಿಗ್ಗೆ 10.30.
ಏ.11ರಂದು ಬೆಳಿಗ್ಗೆ 10.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದ್ದು, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿ.ಪ.ಸದಸ್ಯ ಆರ್.ಕೆ.ಸಿದ್ರಾಮಣ್ಣ, ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ, ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಗನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಉಪಸ್ಥಿತರಿರುವರು. ನಂತರ, ಲಗೇ ರಹೋ ಮುನ್ನಾ ಭಾಯಿ ಹಿಂದಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.