ಕೆರೆಕಟ್ಟೆ ನಿರ್ವಹಣೆಗೆ ಒಂದೇ ಇಲಾಖೆ : ಕಾರಜೋಳ
ಗುರುವಾರ ರಾತ್ರಿ ಸವಣೂರಿಗೆ ಭೆಟ್ಟಿ ನೀಡಿದ್ದ ಅವರು ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಒಟ್ಟೂ 36,600 ಕೆರೆಗಳಿದ್ದು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಕೇವಲ 3400 ಕೆರೆಗಳು ಮಾತ್ರ ಒಳಪಡುತ್ತದೆ. ಉಳಿದ ಕೆರೆಗಳು ಆಯಾ ಗ್ರಾಮ ಪಂಚಾಯ್ತಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುತ್ತಿದೆ ಎಂದರು.
ವರದಾ ನದಿ ದಂಡೆಯಲ್ಲಿನ 25 ಹಳ್ಳಿಗಳು ಪ್ರತಿ ವರ್ಷ ಪ್ರವಾಹ ಪೀಡಿತವಾಗುತ್ತಿವೆ. ಈ ಬಾರಿಯ ಪ್ರವಾಹದ ತೊಂದರೆಗಳನ್ನು ಎದುರಿಸಲು 34 ಕೋಟಿ ರೂ.ಗಳನ್ನು ಸರಕಾರ ಕಾಯ್ದಿರಿಸಿದೆ ಎಂದು ತಿಳಿಸಿದ ಅವರು, ನದಿಯಂಚಿನ ಗ್ರಾಮಸ್ಥರು ಎದುರಿಸುತ್ತಿರುವ ಹಲವಾರು ಸಂಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಎಂದರು. ನದಿಯಂಚಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರೇಜ್ಗಳನ್ನು ನಿರ್ಮಿಸುವ ಬಗ್ಗೆಯೂ ಇಲಾಖೆ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಹೊಸ ಕೆರೆಗಳ ನಿರ್ಮಾಣ, ಜಲಮೂಲಗಳ ಅಭಿವೃದ್ದಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲಾಗುತ್ತದೆ. ಗಂಗಾಕಲ್ಯಾಣ ಯೋಜನೆಯ ಅಡಿ ಎಸ್.ಸಿ.ಎಸ್.ಟಿ ಗುಂಪುಗಳ ಕ್ಷೇತ್ರಗಳಿಗೆ ಸಂಪೂರ್ಣ ಉಚಿತವಾಗಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೊಳ್ಳಲಿದೆ. ಎಕರೆಗೆ 1 ಲಕ್ಷ ರೂ.ಗಳ ವೆಚ್ಚದಲ್ಲಿ ನೀರಾವರಿ ಉಪಕರಣ, ಕೊಳವೆ ಭಾವಿಗಳ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ ಸಚಿವರು, ಈ ಕಾರ್ಯಕ್ರಮಕ್ಕೆ ಒಂದು ಕೋಟಿ ರೂ. ಅನುದಾನವನ್ನು ಸರಕಾರ ಕಾಯ್ದಿರಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಮ್ ಉದಾಸಿ ಉಪಸ್ಥಿತರಿದ್ದರು. ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ರಾಜಶೇಖರ ಸಿಂಧೂರ ಅವರ ನಿವಾಸಕ್ಕೆ ಭೆಟ್ಟಿ ನೀಡಿದ್ದ ಸಚಿವರು, ಬಳಿಕ ಗದಗ ಪಟ್ಟಣಕ್ಕೆ ತೆರಳಿದರು. ನಗರದ ಪ್ರಮುಖರಾದ ಮಂಜುನಾಥ ಗಾಣಿಗೇರ, ಬಸವರಾಜ ಬೆಣ್ಣಿ, ಸಂಗಪ್ಪ ಯರೇಶಿಮಿ, ಅಮರ ಬಗರೆ, ನಾಗೇಶ ಪಾಟೀಲ, ಗದಿಗೇಶ ಕುಲಕರ್ಣಿ, ವೀರಣ್ಣ ಜಾವೂರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.