ಸವಣೂರಿನಲ್ಲಿ ಸತ್ಯಪ್ರಿಯರ ಆರಾಧನಾ ಮಹೋತ್ಸವ
ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಜರುಗಿದ ಆರಾಧನಾ ಕಾರ್ಯಕ್ರಮದಲ್ಲಿ ಕೂಡಲಿ ಆರ್ಯ ಅಕ್ಷೆಭ್ಯತೀರ್ಥ ಸಂಸ್ಥಾನ ಮಠದ ಶ್ರೀ ರಘುವಿಜಯ ತೀರ್ಥರು ಪಾಲ್ಗೊಂಡು, ಆರಾಧನಾ ಕಾರ್ಯಕ್ರಮದೊಂದಿಗೆ ವೈಕುಂಠ ರಾಮದೇವರ ಮಹಾಪೂಜೆಯನ್ನೂ ನಿರ್ವಹಿಸಿದರು. ಆರಾಧನೆಯ ಪ್ರಯುಕ್ತ ಉದಯರಾಗ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಹಸ್ತೋದಕ, ರಥೋತ್ಸವ, ತೀರ್ಥ ಪ್ರಸಾದ ವಿತರಣೆ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ವಿಕೃತ ನಾಮ ಸಂವತ್ಸರದ ಪರ್ಯಂತ ಶ್ರೀಮಠದಲ್ಲಿ ಪ್ರತಿನಿತ್ಯ ಕೈಗೊಳ್ಳಲಾಗುವ ಶ್ರೀ ಧನ್ವಂತರಿ ಹೋಮವನ್ನು ವಾದಿರಾಜಾಚಾರ್ಯ ಚಂದಿ ನಿರ್ವಹಿಸಿದರು. ಶ್ರೀ ಸತ್ಯಪ್ರಿಯರ ಮಹಿಮೆ ಹಾಗೂ ಸಾಧನೆಗಳ ಬಗ್ಗೆ ಪಂ. ಜಯತೀರ್ಥಾಚಾರ್ಯ ಮಳಗಿ ಹಾಗೂ ಪಂ. ರಂಗವಿಟ್ಟಲಾಚಾರ್ಯ ಚಂದಿ ಪ್ರವಚನ ನೀಡಿದರು. ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಗುರುರಾಜಾಚಾರ್ಯ ರಾಯಚೂರ ಹಾಗೂ ಗೋಪಾಲಕೃಷ್ಣಾಚಾರ್ಯ ರಾಯಚೂರ ಅವರ ನೇತೃತ್ವದಲ್ಲಿ ಆರಾಧನಾ ಮಹೋತ್ಸವ ನೆರವೇರಿತು.
ಪಂ. ಚಿಮ್ಮಲಗಿ ಆಚಾರ್ಯರು, ಗೋವಿಂದಾಚಾರ್ಯ ರಾಯಚೂರ, ತ್ರಿವಿಕ್ರಮಾಚಾರ್ಯ ಬಿದರಳ್ಳಿ, ವೇದವ್ಯಾಸ ಗುಡಿ, ಮಧ್ವಾಚಾರ್ಯ ಪಾಂಡುರಂಗಿ, ಕೇಶವ ಪಡಸಲಗಿ, ಮಾಧವಾಚಾರ್ಯ ಪಾಂಡುರಂಗಿ, ಶ್ರೀನಿವಾಸ ಖಾರದ, ಅನಂತಾಚಾರ್ಯ ಬುತ್ತಿ, ರಾಮಾಚಾರ್ಯ ರಾಯಚೂರ, ರಾಮಾಚಾರ್ಯ ನಾಮಾವಳಿ, ರಂಗಣ್ಣ ದೇಶಪಾಂಡೆ, ಜಯತೀರ್ಥ ದೇಶಪಾಂಡೆ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು. ಪ್ರಮೋದಾಚಾರ್ಯ ರಾಯಚೂರ ಕಾರ್ಯಕ್ರಮ ನಿರ್ವಹಿಸಿದರು.
ಕಾರಡಗಿ ರಥೋತ್ಸವ : ಸುಕ್ಷೇತ್ರವಾದ ಕಾರಡಗಿ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವ ಕಾರ್ಯಕ್ರಮ ಮಾ. 30ರಂದು ಜರುಗಲಿದೆ. ಕಾರ್ಯಕ್ರಮದ ಅನ್ವಯ ಕಾರಡಗಿ ಶ್ರೀ ವೀರಭದ್ರೇಶ್ವರ ಸನ್ನಿಧಿಯಲ್ಲಿ ಪ್ರಾತಃಕಾಲ ಗುಗ್ಗಳ ಹಾಗೂ ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಮಂತ್ರೋಡಿ ಸಿದ್ದರಾಮೇಶ್ವರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಧರ್ಮ ಸಭೆ ನಡೆಯಲಿದ್ದು, ಕುಮಾರಿ ನೇತ್ರಾವತಿ ಶಿ. ಹಿರೇಮಠ ಅವರಿಂದ ಪ್ರವಚನ ಜರುಗಲಿದೆ. 30ರಂದು ಸಂಜೆ ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಸೇವೆ ಜರುಗಲಿದೆ.