ಧ್ಯಾನಪೀಠಕ್ಕೆ ನಿತ್ಯಾನಂದ ರಾಜೀನಾಮೆ
ಸದ್ಯಕ್ಕೆ ಆಧ್ಯಾತ್ಮಿಕದ ಕಡೆಗೆ ಹೆಚ್ಚಿನ ಒಲವು ತೋರಲು ನಿರ್ಧರಿಸಿದ್ದು ಹಿರಿಯ ಆಚಾರ್ಯರ ಸಮ್ಮತಿಯಂತೆ ತಾನು ಹೊಂದಿರುವ ಆಶ್ರಮದ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾನೆ.
ಹರಿದ್ವಾರದಲ್ಲಿ ಹಿಂದೂ ಧಾರ್ಮಿಕ ಮುಖಂಡರು, ಆಚಾರ್ಯರು ಮತ್ತು ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿ ರಾಸಲೀಲೆ ಪ್ರಕರಣದ ಬಗ್ಗೆ ವಿವರಿಸಿದ್ದೇನೆ. ಧ್ಯಾನಪೀಠಕ್ಕೆ ಸಾಧಕರೊಬ್ಬರನ್ನು ಮುಖ್ಯ ಸ್ವಾಮೀಜಿಯಾಗಿ ನೇಮಿಸುವಂತೆ ಆಡಳಿತ ಮಂಡಳಿಗೆ ಕೇಳಿಕೊಂಡಿದ್ದೇನೆ. ಆಡಳಿತ ಮಂಡಳಿಯ ಎಲ್ಲಾ ಟ್ರಸ್ಟಿಗಳನ್ನು ಹೊಸದಾಗಿ ನೇಮಕ ಮಾಡಲಾಗುವುದು. ನೂತನವಾಗಿ ನೇಮಕವಾಗಲಿರುವ ಸ್ವಾಮೀಜಿಗೆ ಎಲ್ಲರೂ ಸಹಕಾರ ನೀಡುವಂತೆ ಕೋರುತ್ತೇನೆ ಎಂದು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾನೆ.
ಇತ್ತೀಚಿನ ವಿದ್ಯಮಾನಗಳು ನನಗೆ ಯಾವುದೇ ರೀತಿಯ ಭಂಗ ತರುವುದಿಲ್ಲ. ನಾನು ಮತ್ತೆ ಧ್ಯಾನಪೀಠಕ್ಕೆ ಹಿಂದಿರುಗುತ್ತೇನೆ. ನನ್ನ ವಿವರಣೆ ಅಗತ್ಯ ಎಂದು ಕಂಡುಬಂದಲ್ಲಿ ಭಕ್ತಕೋಟಿಗೆ ಸಂಪೂರ್ಣ ವಿವರಣೆ ನೀಡುತ್ತೇನೆ. ಲಕ್ಷಾಂತರ ಭಕ್ತರು ತುಂಬು ಹೃದಯದಿಂದ ನೀಡುತ್ತಿದ್ದ ತನು,ಮನ ಮತ್ತು ಧನ ಸಹಕಾರವನ್ನು ಮುಂದುವರಿಸಿಕೊಂಡು ಬನ್ನಿ ಎಂದು ನಿತ್ಯಾನಂದ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾನೆ.