ಮಂಗಳವಾರ ರಾತ್ರಿ ಬೆಂಗಳೂರು ಕರಗ
ರಾಜಧಾನಿಯ ಒತ್ತಡದ ಬದುಕು ಮತ್ತು ಆಧುನೀಕರಣದ ಹೊಡೆತಕ್ಕೆ ಸಿಲುಕಿದ್ದರೂ ಪ್ರತಿ ವರ್ಷ ಚೈತ್ರ ಹುಣ್ಣಿಮೆಯ ಮಧ್ಯರಾತ್ರಿ ನಡೆಯುವ ಈ ಧಾರ್ಮಿಕ ಉತ್ಸವದಲ್ಲಿ ಒಂದು ವರ್ಗದ ಜನತೆ ನಂಬಿಕೆಯನ್ನು ಕಳೆದುಕೊಂಡಿಲ್ಲ. ಕರಗದ ಪೂರ್ವಭಾವಿ ಆಚರಣೆಗಳು, ಪೂಜಾ ಕೈಂಕರ್ಯಗಳು ಧರ್ಮರಾಯನಗುಡಿಯಲ್ಲಿ ಈಗಾಗಲೇ ಆರಂಭವಾಗಿದೆ.
ತಿಗಳ ಜನಾಂಗದ ವಂಶಸ್ಥರು ಕರಗ ಹೊರುವುದು ಪದ್ಧತಿ. ಈ ಬಾರಿ ಎ ಜ್ಞಾನೇಂದ್ರ ಎನ್ನುವವರು ಕರಗ ಹೊರಲಿದ್ದಾರೆ. ಇದಕ್ಕಾಗಿ ಆರು ತಿಂಗಳಿನಿಂದ ಕಠಿಣ ವ್ರತ, ಧ್ಯಾನ ಮಾಡಿ ಸಿದ್ದಿ ಪಡೆದಿದ್ದಾರೆ. ಧ್ವಜಾರೋಹಣದ ನಂತರ 9 ದಿನ ಇವರಿಗೆ ದೇವಾಲಯವೇ ವಾಸಸ್ಥಾನ ಮತ್ತು ಪ್ರಸಾದವೇ ಊಟ. ಉತ್ಸವ ಪ್ರಕ್ರಿಯೆ ಮುಗಿಯುವ ತನಕ ಇವರು ಮನೆಗೆ ಹೋಗುವಂತಿಲ್ಲ.
ನಗರದ ನಾಲ್ಕು ದಿಕ್ಕಿನಲ್ಲಿ ಆಂಜನೇಯ ಸ್ವಾಮಿ ದೇವಾಲಯವಿರುವುದರಿಂದ ಈ ನಾಲ್ಕು ದಿಕ್ಕನ್ನು ಮೀರಿ ಕರಗ ಉತ್ಸವ ದಾಟುವಂತಿಲ್ಲ. ಇದು ನಿಯಮ. ಯಾವುದೇ ಜಾತಿ, ಮತ, ವರ್ಗ ಭೇದಭಾವವಿಲ್ಲದೆ ಈ ನಡೆಯುವ ಕರಗದ ಮಾರ್ಗ ಇಂತಿದೆ : ನಗರತ್ ಪೇಟೆ, ಸಿದ್ದಣ್ಣಗಲ್ಲಿ, ಕಬ್ಬನ್ ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ಕೆ ಆರ್ ಮಾರುಕಟ್ಟೆ, ರಾಣಾಸಿಂಗ್ ಪೇಟೆ, ಅಕ್ಕಿಪೇಟೆ, ಮಸ್ತಾನ್ ದರ್ಗಾ, ಬಳೆಪೇಟೆ, ಕಿಲಾರಿ ರಸ್ತೆ, ಯಲಹಂಕ ಗೇಟ್, ಕುಂಬಾರ ಪೇಟೆ, ಗೊಲ್ಲರ ಪೇಟೆ ಮೂಲಕ ಮರಳಿ ಧರ್ಮರಾಯನಗುಡಿಗೆ ವಾಪಸಾಗಲಿದೆ.
ಕರಗ ಉತ್ಸವ ಅರಳೆ ಪೇಟೆಯಲ್ಲಿರುವ ಮಸ್ತಾನ್ ಸಾಹೇಬರ ದರ್ಗಾಕ್ಕೆ ಭೇಟಿಕೊಡುತ್ತದೆ. ಟಿಪ್ಪು ಸುಲ್ತಾನರ ಕಾಲದಲ್ಲಿ ಸಂತರಾಗಿದ್ದ ಮಸ್ತಾನ್ ಸಾಹೇಬ್ ಧರ್ಮರಾಯಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಅವರು ಕಾಲವಶವಾದ ನಂತರ ಅವರಿಗೆ ಗೌರವ ಸೂಚಿಸುವ ಸಲುವಾಗಿ ಕರಗ ಅಲ್ಲಿಗೆ ಹೋಗುವುದುವಾಡಿಕೆ.