ಹಕ್ಕು ಚಲಾಯಿಸುತ್ತಿರುವ ಬೆಂಗಳೂರಿನ ಮತದಾರರು
198 ವಾರ್ಡ್ ಗಳಲ್ಲಿ ಸಾವಿರದ ಮುನ್ನೂರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿದ್ದು ನಗರದ ನಾಗರಿಕರು ಉತ್ಸಾಹದಿಂದ ಮತದಾನಕ್ಕೆ ಬರುತ್ತಿದ್ದಾರೆ. ಮತದಾನ ಸಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಂದಿನಂತೆ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಯಶವಂತಪುರದಲ್ಲಿ ಕಾಂಗ್ರೆಸ್ ಮತದಾರರನ್ನು ಆಮಿಷವೊಡ್ಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತದಾನಕ್ಕೆ ಚಾಲನೆ ದೊರೆತಿದ್ದರೂ ಹಣದ ಹರಿದಾಟಕ್ಕೆ ಇನ್ನೂ ನಿಯಂತ್ರಣಕ್ಕೆ ತರಲಾಗಿಲ್ಲ. ಆರ್ ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಲಕ್ಷ ರು. ಮತ್ತು 30 ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಆಯುಕ್ತ ಪೂಜಾರ್ ಹೇಳಿಕೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಈ ಚುನಾವಣೆಯಲ್ಲಿ ಎಡಗೈ ತೋರುಬೆರಳ ಬದಲು ಬಲಗೈ ತೋರುಬೆರಳಿಗೆ ಅಳಿಸದ ಇಂಕನ್ನು ಹಚ್ಚಬೇಕೆಂಬ ಆದೇಶವಿದ್ದರೂ ಕೆಲ ಕಡೆಗಳಲ್ಲಿ ಎಡಗೈ ತೋರಬೆರಳಿಗೆ ಮಸಿ ಹಚ್ಚಿದ್ದು ಕಂಡುಬಂದಿದೆ. ನಕಲಿ ಮತದಾನಕ್ಕೆ ಇದು ಕುಮ್ಮಕ್ಕು ನೀಡುತ್ತದೆ ಎಂದು ಇತರ ಮತದಾರರು ಆರೋಪಿಸಿದ್ದಾರೆ.
ಅನೇಕ ಕಡೆಗಳಲ್ಲಿ ಪಟ್ಟಿಯಲ್ಲಿ ಹೆಸರು ಕಾಣದ ಮತದಾರರು ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಬ್ಬಾಳದಲ್ಲಿ ನಕಲಿ ಮತಪಟ್ಟಿ ದೊರೆತಿದೆ. ಕೆಆರ್ ಪುರಂ, ವಿವಿ ಪುರಂ ಸೇರಿದಂತೆ ಅನೇಕ ಕಡೆಗಳಲ್ಲಿ ಮತಯಂತ್ರದಲ್ಲಿ ದೊಷ ಬಂದ ಕಾರಣ ಮತದಾನ ನಿಲ್ಲಿಸಲಾಗಿತ್ತು.